ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಬಹುಮಾನ’ ಪ್ರದಾನ ಸಮಾರಂಭ ಆಗಸ್ಟ್ 1ರಂದು ಮಧ್ಯಾಹ್ನ 2 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಕೆ. ಜಗದೀಶ್ ಪೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅರುಣ್ ಸುಬ್ರಾವ್ ಉಭಯಕರ್ (ಸಾಹಿತ್ಯ), ಪುತ್ತೂರು ಪಾಂಡುರಂಗ ನಾಯಕ್ (ಕಲೆ), ಲಕ್ಷ್ಮಿ ಕೃಷ್ಣ ಸಿದ್ದಿ (ಜಾನಪದ) ಅವರಿಗೆ ಅಕಾಡೆಮಿ ‘ಗೌರವ ಪ್ರಶಸ್ತಿ’ ಮತ್ತು ಪ್ರೇಮ್ ಮೊರಾಸ್ ಅವರ ಕವನ-ಏಕ್ಮೂಟ್ ಪಾವ್ಳ್ಯೊ’, ಮೋನಿಕಾ ಡೇಸಾ ಅವರ ಸಣ್ಣಕತೆ ‘ನವಿದಿಶಾ’, ಸ್ಟೀವನ್ ಕ್ವಾಡ್ರಸ್ ಅವರ ಲೇಖನ ‘ಸುಗಂದು ಸ್ವಾಸ್’ಗೆ ‘ಪುಸ್ತಕ ಬಹುಮಾನ’ ನೀಡಿ ಗೌರವಿಸಲಾಗುವುದು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಕೊಂಕಣಿ ನಟ ಹೆನ್ರಿ ಡಿಸಿಲ್ವಾ ಪಾಲ್ಗೊಳ್ಳುವರು ಎಂದು ಹೇಳಿದರು.
‘ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತ ದಿನವಾದ ಆ.20ರಂದು ಕೊಂಕಣಿ ಮಾನ್ಯತಾ ದಿನಾಚರಣೆ ಆಯೋಜಿಸಲಾಗಿದೆ. ಕುಮಟಾ, ಹುಬ್ಬಳ್ಳಿ, ಕಾರವಾರ, ದಾವಣಗೆರೆ, ಬೆಂಗಳೂರು ಮತ್ತು ಮಂಗಳೂರು ಸೇರಿ ಆರು ಕಡೆಗಳಲ್ಲಿ ಸರಳವಾಗಿ ಕಾರ್ಯಕ್ರಮ ಜರುಗಲಿದೆ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.
ಅಕಾಡೆಮಿಯ ರಿಜಿಸ್ಟ್ರಾರ್ ಆರ್. ಮೋಹನ್ ಕಾಮತ್, ಸದಸ್ಯರಾದ ಕೆನ್ಯುಟ್ ಜೀವನ್, ನವೀನ್ ನಾಯಕ್, ಅರುಣ್ ಜಿ.ಶೇಟ್ ಇದ್ದರು.