ಸುಳ್ಯ: ಬಹುತೇಕ ಎಲ್ಲಾ ಇಲಾಖಾ ಅಧಿಕಾರಿಗಳು ಸಭೆಗೆ ಗೈರು ಹಾಜರಾದ ಹಿನ್ನಲೆಯಲ್ಲಿ ಸುಳ್ಯ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಮಿತಿ ಸಭೆಗೆ ಪ.ಜಾತಿ.ಪ.ಪಂಗಡದ ಪ್ರಮುಖರು ಬಹಿಷ್ಕಾರ ಹಾಕಿ ತಾಲೂಕು ಪಂಚಾಯಿತಿ ಕಚೇರಿ ಎದುರಿನಲ್ಲಿ ಪ್ರತಿಭನೆ ನಡೆಸಿದ ಘಟನೆ ನಡೆಯಿತು.
ಸುಳ್ಯ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕುಂದು ಕೊರತೆ ಸಭೆಯನ್ನು ಕರೆಯಲಾಗಿತ್ತು. ಪ.ಜಾತಿ ಮತ್ತು ಪ.ಪಂಗಡದ ಪ್ರಮುಖರು ಮತ್ತು ಸಾರ್ವಜನಿಕರು ಸಭೆಗ ಆಗಮಿಸಿದ್ದರು. ತಹಶೀಲ್ದಾರ್ ಅನಂತಶಂಕರ ಮತ್ತು ಕೆಲವೇ ಮಂದಿ ಇಲಾಖೆಯ ಅಧಿಕಾರಿಗಳು ಮಾತ್ರ ಸಭೆಗೆ ಆಗಮಸಿದ್ದರು. ಇದರಿಂದ ಆಕ್ರೋಶಿತರಾದ ಪ್ರಮುಖರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಬಳಿಕ ತಾಲೂಕು ಪಂಚಾಯಿತಿ ಕಚೇರಿ ಎದುರಿನಲ್ಲಿ ಪ್ರತಿಭಟನೆಯನ್ನೂ ನಡೆಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ನಡಸೇಕಾದ ಕುಂದು ಕೊರತೆ ಸಭೆಯು ಏಳು ತಿಂಗಳ ಬಳಿಕ ಕರೆಯಲಾಗಿದ್ದರೂ ಬಹುತೇಕ ಅಧಿಕಾರಿಗಳು ಬಂದಿಲ್ಲ. 16 ಇಲಾಖೆಗಳ ಪೈಕಿ ಕೆಲವೇ ಇಲಾಖೆಯ ಅಧಿಕಾರಿಗಳು ಮಾತ್ರ ಸಭೆಗೆ ಬಂದಿದ್ದಾರೆ. ಅಲ್ಲದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಭೆಗೆ ಕರೆಯಲಾಗಿದ್ದರೂ ಕೆಲವೇ ಮಂದಿ ಮಾತ್ರ ಬಂದಿದ್ದಾರೆ.
ಇದು ಪ.ಜಾತಿ ಮತ್ತು ಪ.ಪಂಗಡ ವಿಭಾಗದ ಜನರ ವಿರುದ್ಧ ಮಾಡಿದ ಅನ್ಯಾಯ ಎಂದು ಮುಖಂಡರು ಆರೋಪಿಸಿದರು. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ತೀವ್ರವಾಗಿದೆ ಈ ಕುರಿತು ಸಭೆಯಲ್ಲಿ ಮಾತನಾಡಲು ಸಿದ್ಧತೆ ನಡೆಸಲಾಗಿತ್ತು. ಬಸವ ವಸತಿ, ಇಂದಿರಾ ಆವಾಝ್ ಯೋಜನೆ, ಜಾತಿ ಪ್ರಮಾಣ ಪತ್ರ, ಡಿಸಿ ಮನ್ನಾ ಭೂಮಿ ಸಮಸ್ಯೆ ಸೇರಿದಂತೆ ಹಲವಾರು ಸಸ್ಯೆಗಳು ಕಾಡುತ್ತಿದೆ. ಇದರ ಪರಿಹಾರಕ್ಕೆ ಅಧಿಕಾರಿಗಳು ಯಾವುದೇ ಕ್ರಮವನ್ನೂ ತೆಗೆದುಕೊಳ್ಳುವದಿಲ್ಲ. ಹಿಂದಿನ ಸಭೆಯಲ್ಲಿ ಮಾಡಿದ ನಿರ್ಣಯಗಳ ಅನುಷ್ಠಾನವೂ ಮಾಡಿಲ್ಲ. ಮಾತ್ರವಲ್ಲದೆ ಸರ್ಕಾರದ ಆದೇಶದಂತೆ ಸಭೆಯನ್ನು ಕೂಡ ಕರೆಯದೆ ಕಡೆಗಣಿಸಲಾಗುತಿದೆ. ಕಳೆದ ಆಗಸ್ಟ್ ತಿಂಗಳ ಬಳಿಕ ಕುಂದು ಕೊರತೆ ಸಭೆಯನ್ನೇ ಕರೆದಿಲ್ಲ ಎಂದು ಅವರು ದೂರಿದರು. ಪ್ರಮುಖರಾದ ನಾರಾಯಣ ಜಟ್ಟಿಪಳ್ಳ, ಆನಂದ ಬೆಳ್ಳಾರೆ, ಸೀತಾನಂದ ಬೇರ್ಪಡ್ಕ, ಅಚ್ಚುತ ಮಲ್ಕಜೆ, ಕೆ.ಎಂ.ಬಾಬು ಜಾಲ್ಸೂರು, ನಂದರಾಜ ಸಂಕೇಶ್ ಮತ್ತಿತರರು ಮಾತನಾಡಿದರು. ತಾ.ಪಂ.ಸದಸ್ಯ ಚನಿಯ ಕಲ್ತಡ್ಕ, ತಾ.ಪಂ.ಮಾಜಿ ಅಧ್ಯಕ್ಷ ಶಂಕರ್ ಪೆರಾಜೆ, ಸರಸ್ವತಿ ಬೊಳಿಯಮಜಲು, ಉಮೇಶ.ಹೆಚ್ ಮತ್ತಿತರರು ಉಪಸ್ಥಿತರಿದ್ದರು.
ಗೈರು ಹಾಜರಾದ ಇಲಾಖಾ ಅಧಿಕಾರಿಗಳಿಗೆ ನೋಟೀಸ್:
ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದ ತಾಲೂಕು ಮಟ್ಟದ ಸಭೆಯಲ್ಲಿ ಭಾಗವಹಿಸಲು ತಿಳುವಳಿಕೆ ಪತ್ರವನ್ನು ನೀಡಲಾಗಿದ್ದರೂ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡುವುದಾಗಿ ತಹಶೀಲ್ದಾರ್ ಅನಂತಶಂಕರ ಪತ್ರಕರ್ತರಿಗೆ ತಿಳಿಸಿದ್ದಾರೆ. ಬಳಿಕ ಸಮಾಜ ಕಲ್ಯಾಣಾಧಿಕಾರಿ ಪ.ಜಾತಿ ಮತ್ತು ಪ.ಪಂಗಡದ ಮುಖಂಡರ ಜೊತೆ ಚರ್ಚೆ ನಡೆಸಿ ಕುಂದುಕೊರತೆ ಸಭೆಯನ್ನು ಏ.12 ರಂದು ನಡೆಸಲು ನಿರ್ಧರಿಸಲಾಯಿತು.