News Karnataka Kannada
Wednesday, May 08 2024
ಕರಾವಳಿ

ಅಪ್ರಾಪ್ತೆಯ ವಿಚಾರಣೆಯಲ್ಲಿ ಚಿತ್ರಹಿಂಸೆ ಆರೋಪ: ಮೂವರು ಸಿಬ್ಬಂದಿ ಅಮಾನತು

Photo Credit :

ಅಪ್ರಾಪ್ತೆಯ ವಿಚಾರಣೆಯಲ್ಲಿ ಚಿತ್ರಹಿಂಸೆ ಆರೋಪ: ಮೂವರು ಸಿಬ್ಬಂದಿ ಅಮಾನತು

ಪುತ್ತೂರು : ಅರಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತಡವಾಗಿ ಬಂದ ಪಿಟಿಷನ್ ದೂರಿನ ಆಧಾರದಲ್ಲಿ ಅಪ್ರಾಪ್ತೆಯೋರ್ವರನ್ನು ಠಾಣೆಗೆ ಕರೆದು ಚಿತ್ರಹಿಂಸೆ ನೀಡಿದ್ದಾರೆಂದು ಆರೋಪಿಸಿ ಅಪ್ರಾಪ್ತೆ ಪುತ್ತೂರು ಆಸ್ಪತ್ರೆಗೆ ದಾಖಲಾದ ಘಟನೆ ಜೂ.29ರಂದು ಬೆಳಿಗ್ಗೆ ನಡೆದಿದ್ದ, ಇದೇ ವಿಚಾರಕ್ಕೆ ಸಂಬಂಧಿಸಿ ಅಪ್ರಾಪ್ತೆಯನ್ನು ಸ್ಪೆಷಲ್ ಚೈಲ್ಡ್ ಮಹಿಳಾ ಪೊಲೀಸ್ ತನಿಖೆ ನಡೆಸದೆ ದುರ್ನಡತೆ ತೋರಿದ್ದಾರೆಂದು ಸಂಪ್ಯ ಪೊಲೀಸ್ ಠಾಣೆಯ ಮೂವರು ಸಿಬಂದಿಗಳನ್ನು ಅಮಾನತು ಗೊಳಿಸಿದ ಘಟನೆಯೂ ಸಂಜೆ ವೇಳೆ ನಡೆದಿದೆ.

ಘಟನೆಯ ಹಿನ್ನಲೆ……

ಅಡಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿರುವ ಶ್ರೀಕೃಷ್ಣ ಭಜನಾ ಮಂದಿರದ ಬಳಿಯ ನಿವಾಸಿ ಮಮ್ತಾಜ್ ಎಂಬವರ ಮನೆಯಿಂದ ವಾರದ ಹಿಂದೆ 4 ಪವನ್ ತೂಕದ ಚಿನ್ನದ ಸರವೊಂದು ಕಳವಾಗಿತ್ತು. ಕಳವು ಕುರಿತು ಮಮ್ತಾಜ್ ಅವರು ಕೆಲವು ಸಮಯಗಳಿಂದ ಪಕ್ಕದ ಮನೆಯೊಂದಕ್ಕೆ ಬಾಡಿಗೆಗೆ ಬಂದಿದ್ದ ಆನಂದ, ಅವರ ಪತ್ನಿ ಪುಷ್ಪಾ ,ಹಾಗೂ ಅವರ ಮಕ್ಕಳ ವಿರುದ್ಧ ಸಂಪ್ಯ ಪೊಲೀಸರಿಗೆ ಪಿಟೀಷನ್ ದೂರು ನೀಡಿದ್ದರು. ಆನಂದ ಮತ್ತು ಅವರ ಪತ್ನಿ ಮಕ್ಕಳು ಇದ್ದ ಮನೆಯಲ್ಲಿ ವಿದ್ಯುತ್ ಇರಲಿಲ್ಲ. ಈ ನಿಟ್ಟಿನಲ್ಲಿ ಅವರ ಮನೆ ಮಂದಿ ಮೊಬೈಲ್ ಚಾರ್ಜ್ ಮಾಡಲು ಮಮ್ತಾಜ್ ಮನೆಗೆ ಹೋಗುತ್ತಿದ್ದರು. ಈ ವೇಳೆ ಕಳವು ನಡೆದಿರಬಹುದು ಎಂದು ಮಮ್ತಾಜ್ ಅವರು ಆನಂದ್ ಮನೆಯವರನ್ನು ವಿಚಾರಿಸಲು ಪೊಲೀಸರಲ್ಲಿ ವಿನಂತಿಸಿದ್ದರು. ಇದಕ್ಕೆ ಸಂಬಂಧಿಸಿ ಪೊಲೀಸರು ಆನಂದ್ ಮನೆಯವರನ್ನು ತನಿಖೆಗೆ ಬರುವಂತೆ ಸೂಚಿಸಿದ ಹಿನ್ನಲೆಯಲ್ಲಿ ದಲಿತ್ ಸೇವಾ ಸಮಿತಿಯವರು ಆ ನಾಲ್ವರನ್ನು ಜೂ. 28ರಂದು ಬೆಳಿಗ್ಗೆ ಸಂಪ್ಯ ಠಾಣೆಗೆ ಬಿಟ್ಟು ಬಂದಿದ್ದರು. ಆದರೆ ಆನಂದ್ ಅವರ ಅಪ್ರಾಪ್ತೆ ಮಕ್ಕಳನ್ನು ವಿಚಾರಣೆ ನಡೆಸಿದ ಪೊಲೀಸರು ಅವರಿಗೆ ಹೊಡೆದು ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿದ್ದಾರೆ. ಕಳವು ಮಾಡಿರುವುದನ್ನು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ, ಒತ್ತಾಯ ಪೂರ್ವಕವಾಗಿ ಕಳವು ಮಾಡಿರುವುದನ್ನು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ಆನಂದ ಮತ್ತು ಪುಷ್ಪಾ ಅವರಿಗೂ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಆನಂದ ಅವರಿಗೆ ಎಸ್‍ಐ ಅವರೇ ಹೊಡೆದಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 11.30ರ ತನಕ ಠಾಣೆಯಲ್ಲಿ ಕೂಡಿ ಹಾಕಿ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು.

ಅಪ್ರಾಪ್ತೆ ವಿದ್ಯಾರ್ಥಿನಿ ಅಸ್ಪತ್ರೆಗೆ ದಾಖಲು: ಪೊಲೀಸ್ ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆ ವಿದ್ಯಾರ್ಥಿನಿ ಮತ್ತು ಆಕೆಯ ತಂದೆ ಹಾಗೂ ತಾಯಿ ಜೂ. 29ರಂದು ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ದಲಿತ್ ಸೇವಾ ಸಂಘಟನೆಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ತಾಲೂಕು ಅಧ್ಯಕ್ಷ ರಾಜು ಹೊಸ್ಮಠ, ಲೋಕೇಶ್ ತೆಂಕಿಲ ಸೇರಿದಂತೆ ಸಂಘಟನೆಯ ಹಲವು ಪ್ರಮುಖರು ಜಮಾಯಿಸಿ, ನ್ಯಾಯಕ್ಕಾಗಿ ಪಟ್ಟುಹಿಡಿದರು. ಇದೇ ವೇಳೆ ಸಂಪ್ಯ ಪೊಲೀಸ್ ಠಾಣೆಯ ಎಸ್‍ಐ ಸತ್ತಿವೇಲು ಆಸ್ಪತ್ರೆಗೆ ಬಂದು, ನೊಂದ ಅಪ್ರಾಪ್ತೆ ವಿದ್ಯಾರ್ಥಿನಿ ಮತ್ತು ದಲಿತ ಮುಖಂಡರ ಜತೆ ಮಾತುಕತೆ ನಡೆಸಿದರು. ಆ ಬಳಿಕ ದಲಿತ ಮುಖಂಡರು ಎಸ್‍ಐ ಅವರನ್ನು ಬಿಟ್ಟು ಉಳಿದ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸತೊಡಗಿದರು.

ಪುತ್ತೂರು ಪ್ರಭಾರ ಸಿಡಿಪಿಒ ಭಾರತಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಇನ್ಸ್‍ಪೆಕ್ಟರ್ ನಾಗೇಶ್ ಕದ್ರಿ, ಉಪ್ಪಿನಂಗಡಿ ಎಸ್.ಐ ನಂದ ಕುಮಾರ್, ಡಿವೈಎಸ್ಪಿ ದಿನಕರ್ ಶೆಟ್ಟಿ ಹಾಗೂ ಎಸ್ಪಿ ಲಕ್ಷ್ಮೀಪ್ರಸಾದ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿನಿ ಹಾಗೂ ಆಕೆಯ ಹೆತ್ತವರಿಂದ ಮಾಹಿತಿ ಪಡೆದರು. ದಲಿತ್ ಸೇವಾ ಸಮಿತಿಯ ಮುಖಂಡರನ್ನು ಪುತ್ತೂರು ನಗರ ಠಾಣೆಗೆ ಕರೆಸಿಕೊಂಡು ಮಾತುಕತೆ ನಡೆಸಿದ ಎಸ್ಪಿ ಲಕ್ಷ್ಮೀಪ್ರಸಾದ್ ಅವರು ಆರೋಪಿತ ಸಿಬಂದಿಗಳನ್ನು ಅಮಾನತುಗೊಳಿಸುವ ಭರವಸೆ ನೀಡಿದರು.

ಮೂವರು ಪೊಲೀಸರ ಅಮಾನತು: ಅಪ್ರಾಪ್ತೆ ವಿದ್ಯಾರ್ಥಿನಿಗಳಿಬ್ಬರ ಜತೆ ವಿಚಾರಣೆ ಹಾಜರಾದ ಸಂದರ್ಭದಲ್ಲಿ ದುರ್ನಡತೆ ತೋರಿದ ಸಂಪ್ಯ ಠಾಣೆಯ ಸಿಬ್ಬಂದಿ ದಿನೇಶ್, ಗಾಯತ್ರಿ ಮತ್ತು ಪ್ರಶ್ನಿತಾ ಅವರನ್ನು ಅಮಾನತು ಮಾಡಲಾಗಿದೆ. ಅಪ್ರಾಪ್ತರನ್ನು ವಿಚಾರಣೆಗೊಳಪಡಿಸಲು ಬೇರೆಯೇ ವ್ಯವಸ್ಥೆಯಿದೆ. ಈ ಬಾಲಕಿಯರು ಅಪ್ರಾಪ್ತೆಯಾಗಿರುವ ಕಾರಣ ಸ್ಪೆಷಲ್ ಚೈಲ್ಡ್ ಮಹಿಳಾ ಪೊಲೀಸರಿಂದ ತನಿಖೆ ನಡೆಸಬೇಕಾಗಿತ್ತು. ಆದರೆ ಇಲ್ಲಿ ಆ ಪ್ರಕ್ರಿಯೆ ನಡೆದಿಲ್ಲ. ಬದಲಾಗಿ ದುರ್ನಡತೆ ತೋರಲಾಗಿದೆ. ಈ ಕಾರಣಕ್ಕಾಗಿ ಆರೋಪಿತ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತಿನಲ್ಲಿರಿಸಿ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪತ್ರಿಕಾ ಮಾಧ್ಯಮದವರಿಗೆ ಮಾಹಿತಿ ನೀಡಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
188

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು