ಪುತ್ತೂರು : ಅಪ್ರಾಪ್ತೆಯ ಮೇಲೆ ನ್ಯಾಯ ಸಮ್ಮತವಲ್ಲದ ವಿಚಾರಣೆ ನಡೆಸಿ ದುವರ್ತನೆ ತೋರಿದ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಹಾಗೂ ಅಮಾನತುಗೊಂಡಿರುವ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಕೆಲಸದಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜು. 2ರಂದು ಎಲ್ಲಾ ದಲಿತ ಸಂಘಟನೆಗಳ ವತಿಯಿಂದ ಸಂಪ್ಯ ಠಾಣೆಯ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಹೇಳಿದರು.
ಅಪ್ರಾಪ್ತೆಗೆ ಪೊಲೀಸರು ದುವರ್ತನೆ ತೋರಿದ ಘಟನೆಗೆ ಸಂಬಂಧಿಸಿ ನ್ಯಾಯಕ್ಕಾಗಿ ಆಗ್ರಹಿಸಿ ಜೂ.30ರಂದು ಇಲ್ಲಿನ ಪುತ್ತೂರು ಸರಕಾರಿ ಅಸ್ಪತ್ರೆಯ ಎದುರು ವಿವಿಧ ದಲಿತ ಸಂಘಟನೆಗಳ ವತಿಯಿಂದ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ವಾಸ್ತವ್ಯಕ್ಕೆ ಸ್ವಂತ ಮನೆ ಇಲ್ಲದೆ ಶೋಷಣೆಗೆ ಒಳಗಾಗಿರುವ ಆ ಕುಟುಂಬಕ್ಕೆ ತಕ್ಷಣ ಜಿಲ್ಲಾಧಿಕಾರಿಗಳು ಮನೆ ಮಂಜೂರು ಮಾಡಬೇಕೆಂದು ಅವರು ಒತ್ತಾಯಿಸಿದರು.
ದಲಿತ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ:
ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್ಬಾಗ್ ಅವರು ಮಾತನಾಡಿ, ದೂರು ನೀಡಿದ ಮಾತ್ರಕ್ಕೆ ಅಪ್ರಾಪ್ತೆಯನ್ನು ಠಾಣೆಯಲ್ಲಿ ವಿಚಾರಣೆ ಮಾಡುವ ನಿಯಮ ಇಲ್ಲ. ಆದರೆ ಇಲ್ಲಿ ಅಪ್ರಾಪ್ತೆ ಮತ್ತು ಆಕೆಯ ತಂದೆ ತಾಯಿಗೆ ಪೊಲೀಸರು ಚಿತ್ರ ಹಿಂಸೆ ನೀಡಿದ್ದಾರೆ. ಜಿಲ್ಲೆಯಲ್ಲಿ 5 ಲಕ್ಷದಷ್ಟು ದಲಿತರಿದ್ದು, ನಾವೆಲ್ಲ ಒಟ್ಟಾಗಿ ದಲಿತರ ಶಕ್ತಿ ಏನೆಂಬುವುದನ್ನು ನಾವು ಜು.2ರಂದು ಸಂಪ್ಯ ಠಾಣೆಯ ಮುಂದೆ ತೋರಿಸುತ್ತೇವೆ. ನ್ಯಾಯ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಎದುರೂ ಪ್ರತಿಭಟನೆ ನಡೆಸುತ್ತೇವೆ ಎಂದರು.
ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ:
ದಲಿತ್ ಸೇವಾ ಸಮಿತಿಯ ತಾಲ್ಲೂಕು ಅಧ್ಯಕ್ಷ ರಾಜು ಹೊಸ್ಮಠ ಅವರು ಮಾತನಾಡಿ, ದಲಿತ ಸಂಘಟನೆಯಿಂದ ಏನಾಗುತ್ತದೆ ಎಂದು ಸಂಪ್ಯ ಠಾಣೆಯ ಸಿಬ್ಬಂದಿ ದಿನೇಶ್ ಪ್ರಶ್ನಿಸಿದ್ದಾರೆ. ಆದರೆ ನಮ್ಮ ಶಕ್ತಿ ನಾವು ತೋರಿಸುತ್ತೇವೆ. ಜೊತೆಗೆ ಅಪ್ರಾಪ್ತೆಗೆ ಚಿತ್ರಹಿಂಸೆ ನೀಡಿದ ಎಸ್ಐ ಹಾಗೂ ಮೂವರು ಪೊಲೀಸರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿಕೊಳ್ಳಬೇಕು ಎಂದರು. ದಲಿತ ಸಂಘಟನೆಗಳ ಮುಖಂಡರಾದ ಗಣೇಶ್ ಸೂಟರ್ಪೇಟೆ, ಗಣೇಶ್ ಕಾರೆಕ್ಕಾಡು, ಆನಂದ್, ಶಿವಪ್ಪ ಅಟ್ಟೋಳೆ, ಪ್ರಸಾದ್ ಬೊಳ್ಮಾರು, ಮನೋಹರ್ ಕೋಡಿಜಾಲು, ನಿಶಾಂತ್ ಮುಂಡೋಡಿ, ಈಶು ಮುಲ್ಕಿ, ಮಣಿ ರೇಂಜರ್ ಪುತ್ತೂರು, ನಾಗೇಶ್ ಮಂಗಳೂರು, ಸುಂದರ ಸಿದ್ಯಾಳ, ಕೇಶವ್ ಪಡೀಲು, ಸಂಜೀವ ಕೋಟ್ಯಾನ್, ಆನಂದ್ ದರ್ಬೆ, ಲಲಿತಾ ನಾಯ್ಕ್ ಮೊಟ್ಟೆತ್ತಡ್ಕ, ಕೇಶವ್ ಕುಪ್ಲಾಜೆ, ಸುರೇಶ್ ತೋಟಂತಿಲ, ಅಣ್ಣಪ್ಪ ಕಾರೆಕ್ಕಾಡು, ದೇವಪ್ಪ, ಮನೋಹರ್ ಕಾರೆಕ್ಕಾಡು, ಗುರುವಪ್ಪ, ಮೋಹನ್ ನೆಲ್ಲಿಗುಂಡಿ, ರೋಹಿತ್ ಅಮ್ಚಿನಡ್ಕ, ಗುರುವಪ್ಪ ಪುರುಷರಕಟ್ಟೆ ಮತ್ತಿತರರು ಪಾಲ್ಗೊಂಡಿದ್ದರು.