ಮಂಡ್ಯ: ಒಣಗಿರುವ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ಹಾಗೂ ಉಳಿದ ಬೆಳೆ ರಕ್ಷಣೆಗೆ ತಕ್ಷಣ ನಾಲೆಯಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಎಲ್ಲಾ ತಾಲೂಕುಗಳಲ್ಲೂ ರಸ್ತೆ ಬಂದ್ನಂತಹ ಉಗ್ರ ಚಳವಳಿ ನಡೆಸಲು ರೈತ ಸಂಘದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಯುವ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆದ ಪ್ರಮುಖ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಉಗ್ರ ಚಳವಳಿಗೆ ನಿರ್ಣಯಿಸಲಾಗಿದ್ದು, ಬೆಳೆ ರಕ್ಷಣೆಗೆ ಕಳೆದ 8 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಕೆ.ಆರ್.ಎಸ್. ಮುತ್ತಿಗೆ ಹಾಕಲು ಹೋದಾಗ ಪೊಲೀಸರನ್ನು ಮುಂದೆ ಬಿಟ್ಟು ಬಂಧಿಸಿ, ಮುಖ್ಯಮಂತ್ರಿಗಳು ತಮ್ಮ ಮಗನ ಸೋಲಿನಿಂದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಚಳವಳಿಯ ಸ್ವರೂಪ ಬದಲಿಸಲು ನಿರ್ಧರಿಸಲಾಯಿತು.
ಮೈಷುಗರ್ ಮತ್ತು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ತ್ವರಿತವಾಗಿ ಪ್ರಾರಂಭಿಸುವದರ ಜೊತೆಗೆ ಉಳಿದ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಹಣವನ್ನು ಪಾವತಿಸಲು ಜಿಲ್ಲಾಧಿಕಾರಿಗಳು ಮುಂದಾಗುವುದರ ಮೂಲಕ ಕಾರ್ಖಾನೆಗಳು ಪ್ರಾರಂಭಿಸುವಂತೆ ಒತಾಯಿಸಿದರು.
ಈ ಎಲ್ಲ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರವು ಸ್ಪಂಧಿಸದ ಕಾರಣ ರಾಜ್ಯಪಾಲರವರಿಗೆ ನಮ್ಮ ಸಮಸ್ಯೆಗಳನ್ನು ಲಿಖಿತ ಮೂಲಕ ನೀಡುವ ಬಗ್ಗೆ ತೀರ್ಮಾನಿಸಲಾಯಿತು.
ಒಣಗಿರುವ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ಹಾಗೂ ಉಳಿದ ಬೆಳೆಗಳಿಗೆ ತಕ್ಷಣ ನೀರು ಬಿಡಬೇಕೆಂದು ಜಿಲ್ಲೆಯ ಎಲ್ಲಾ ಶಾಸಕರಿಗೂ ಒತ್ತಾಯಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಮುಖಂಡರಾದ ಕೆ.ಟಿ. ಗೋವಿಂದೇಗೌಡ, ಬಿ. ಬೊಮ್ಮೇಗೌಡ, ಜಿ.ಎಸ್. ಲಿಂಗಪ್ಪಾಜಿ, ರಾಮಕೃಷ್ಣಯ್ಯ ಇತರರು ಸಭೆಯಲ್ಲಿ ಭಾಗವಹಿಸಿದ್ದರು.