ಕಾಸರಗೋಡು: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಆದಿತ್ಯವಾರ ಮುಂಜಾನೆ ವಾಹನ ಅಪಘಾತದಲ್ಲಿ ಮೃತಪಟ್ಟ ಕಾಸರಗೋಡು ನಿವಾಸಿಗಳಾದ ನಾಲ್ಕು ಮಂದಿಯ ಮೃತದೇಹಗಳನ್ನು ಇಂದು ಸ್ವ-ಗೃಹಗಳಿಗೆ ತಲುಪಿಸಲಾಯಿತು.
ಮಧೂರು ಮನ್ನಿಪ್ಪಾಡಿ ನಿವಾಸಿ ಸದಾಶಿವ ಗಟ್ಟಿ (೫೫), ಕುಂಬಳೆ ನಾಯ್ಕಾಪು ವಿನ ಪಕ್ಕೀರ ಗಟ್ಟಿ (೭೨), ಸಹೋದರ ಮಂಜಪ್ಪ ಗಟ್ಟಿ (೬೮), ಮಂಜಪ್ಪ ಗಟ್ಟಿಯವರ ಪತ್ನಿ ಸುಂದರಿ (೫೩) ಎಂಬವರ ಮೃತದೇಹಗಳನ್ನು ಮನೆಗಳಿಗೆ ತಲುಪಿಸಲಾಯಿತು.
ಸದಾಶಿವ ಗಟ್ಟಿಯವರ ಮೃತದೇಹವನ್ನು ನಾಯ್ಕಾಪುವಿಗೆ ತಂದು ಬಳಿಕ ಮಧೂರು ಮನ್ನಿಪ್ಪಾಡಿಯ ಮನೆಗೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಪಕ್ಕೀರ ಗಟ್ಟಿ, ಮಂಜಪ್ಪ ಗಟ್ಟಿ ಹಾಗೂ ಸುಂದರಿ ಎಂಬವರ ಮೃತದೇಹ ಗಳನ್ನು ನಾಯ್ಕಾಪು ಜಂಕ್ಷನ್ನ ಮನೆಗೆ ತಲುಪಿಸಿ ನೂರಾರು ಮಂದಿಯ ಅಂತಿಮ ನಮನದ ಬಳಿಕ ನಾರಾಯಣಮಂಗಲದ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮಧೂರು ಪಳ್ಳಕ್ಕೋಡು ತರವಾಡಿ ನಿಂದ ಒಂಭತ್ತು ಮಂದಿ ಮೊನ್ನೆ ಮಧ್ಯಾಹ್ನ ತಿರುಪತಿ ಶ್ರೀ ವೆಂಕಟರಮಣ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದರು. ಇವರು ಸಂಚರಿ ಸಿದ ಕಾರು ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಬಸ್ ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ನಿನ್ನೆ ಮುಂಜಾನೆ ೨ ಗಂಟೆ ವೇಳೆಗೆ ಈ ಭೀಕರ ದುರ್ಘಟನೆ ಸಂಭವಿಸಿದೆ.
ಅಪಘಾತ ತಕ್ಷಣ ನಾಲ್ವರು ಮೃತಪಟ್ಟಿದ್ದರು. ಕಾರು ಚಾಲಕ ಸಹಿತ ಆರು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟ ನಾಯ್ಕಾಪು ಜಂಕ್ಷನ್ ನಿವಾಸಿಗಳ ಮನೆಗೆ ಇಂದು ಬೆಳಿಗ್ಗೆ ತಹಶೀಲ್ದಾರ್ ಅನಿಲ್ ಫಿಲಿಪ್, ಶಾಸಕ ಪಿ.ಬಿ. ಅಬ್ಜುಲ್ ರಜಾಕ್, ಕುಂಬಳೆ ಪಂಚಾಯತ್ ಅಧ್ಯಕ್ಷ ಕೆ.ಎಲ್. ಪುಂಡರೀಕಾಕ್ಷ, ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ, ಪಂ. ಸದಸ್ಯ ರಮೇಶ್ ಭಟ್, ಸಿಪಿಎಂ ಏರಿಯಾ ಸೆಕ್ರೆಟರಿ, ಸಿ.ಎ. ಸುಬೈರ್, ನೇತಾರ ರಘುದೇವನ್ ಮಾಸ್ತರ್ ಸಹಿತ ಹಲವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನುಡಿದರು.
ಇದೇ ವೇಳೆ ಮೃತಪಟ್ಟವರ ಕುಟುಂಬಗಳಿಗೆ ಸರಕಾರದ ವತಿಯಿಂದ ನೀಡುವ ಧನಸಹಾಯವಾದ ತಲಾ ೧೦ ಸಾವಿರ ರೂಪಾಯಿಯನ್ನು ತಹಶೀಲ್ದಾರ್ ಅನಿಲ್ ಫಿಲಿಪ್ ಹಸ್ತಾಂತ ರಿಸಿದರು. ಹೆಚ್ಚುವರಿ ಧನಸಹಾಯವನ್ನು ಮುಖ್ಯಮಂತ್ರಿಯವರ ಪರಿಹಾರನಿಧಿ ಯಿಂದ ನೀಡುವುದಾಗಿ ಭರವಸೆ ನೀಡಲಾಗಿದೆ.