ಪುತ್ತೂರು: ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿದ್ದಾರೆ.
ಕುಂದಾಪುರ ತಾಲೂಕಿನ ಅಲಂದೂರು ನಿವಾಸಿ ಅಬ್ದುಲ್ ಸಲಾಂ ವಿರುದ್ಧ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಹದಿನೈದು ಪ್ರಕರಣಗಳು ದಾಖಲಾಗಿದೆ. ಆರೋಪಿಯಿಂದ ಕಳುವುಗೈದ 2.98 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಭೂಷಣ್ ಜಿ.ಬೋರಸೆ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆರೋಪಿಯೊಂದಿಗೆ ಪುತ್ತೂರು ತಾಲೂಕಿನ ಸವಣೂರಿನ ತೌಸಿಫ್, ಆಸೀಫ್ ಕೂಡ ಸೇರಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿ ಸಲಾಂ ದರೋಡೆ, ವಾಹನ ಕಳ್ಳತನ, ದನ ಕಳ್ಳತನ ಮೊದಲಾದ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದವರು ಮಾಹಿತಿ ನೀಡಿದರು.
ಆರೋಪಿ ಮತ್ತು ಇನ್ನಿಬ್ಬರು ಕಳೆದ ಮಾರ್ಚ್ ನಿಂದ ನವೆಂಬರ್ ತನಕ ಎರಡು ಅಟೋ ಮತ್ತು ನಾಲ್ಕು ಮೋಟಾರ್ ಸೈಕಲ್ ಕಳುವುಗೈದಿದ್ದಾರೆ. ಅಬ್ದುಲ್ ಸಲಾಂ ವಿರುದ್ಧ ಶಿವಮೊಗ್ಗ, ಕಾರ್ಕಳ, ಭಟ್ಕಳದಲ್ಲಿ ವಾಹನ ಕಳ್ಳತನ, ಬೈಂದೂರಿನಲ್ಲಿ ದರೋಡೆ ಮತ್ತು ಭಟ್ಕಳದಲ್ಲಿ ದರೋಡೆ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.
ಆರೋಪಿಗಳು ತಾವು ಕದ್ದೊಯ್ದ ವಾಹನಗಳ ನಂಬರ್ ಬದಲಿಸಿ ಅದನ್ನು ಕಾಸರಗೋಡಿನಲ್ಲಿ ಮಾರಾಟ ಮಾಡುತ್ತಿದ್ದರು. ಕೆಲ ವಾಹನಗಳ ಬಣ್ಣ ಬದಲಾಯಿಸಿ ಮಾರಾಟ ಮಾಡಿದ್ದು ಇದೆ. ಒಂದು ಬಾರಿ ತೌಸಿಫ್, ಇನ್ನೊಂದು ಬಾರಿ ಆಸೀಫ್, ಮಗದೊಮ್ಮೆ ಸಲಾಂ ಹೀಗೆ ಕಳ್ಳತನ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಎಸ್ಪಿ ಭೂಷಣ್ ಜಿ.ಬೋರಸೆ ಹೇಳಿದರು.
ಆರೋಪಿ ಅಬ್ದುಲ್ ಸಲಾಂಗೆ ಎರಡು ಮದುವೆ ಆಗಿತ್ತು. ಮೊದಲನೆಯ ಪತ್ನಿ ಕಾಸರಗೋಡು ನಿವಾಸಿ ಆಗಿದ್ದು, ಎರಡನೆ ಪತ್ನಿ ಭಟ್ಕಳದ ನಿವಾಸಿ ಆಗಿದ್ದಾರೆ. ಆರೋಪಿ ಭಟ್ಕಳದ ಎರಡನೆ ಹೆಂಡತಿಯ ಮನೆಯಲ್ಲಿ ವಾಸಿಸುತ್ತಿದ್ದ. ಆದರೆ ಕದ್ದ ವಾಹನವನ್ನು ತನ್ನ ಮೊದಲನೆಯ ಪತ್ನಿಯ ಮನೆಗೆ ಸಾಗಾಟ ಮಾಡುತ್ತಿದ್ದ. ಅಲ್ಲಿಂದಲೆ ಮಾರಾಟ ವ್ಯವಹಾರ ನಡೆಸುತ್ತಿದ್ದ. ಆರೋಪಿ ಕಳ್ಳತನಗೈದ ವಾಹನವನ್ನು ಮೊದಲನೆಯ ಪತ್ನಿಯ ಸಂಬಂಧಿಕರ ಮನೆಯಿರುವ ಉಪ್ಪಳ ಮನಿಮಂಡಾದಿಂದ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳವಾರ ನಗರದ ಮುರದಲ್ಲಿ ನಡೆದ ಕಾರ್ಯಾಚರಣೆಯು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಭೂಷಣ್ ಜಿ. ಬೋರಸ್, ಹೆಚ್ಚುವರಿ ಪೊಲೀಸ್ ಅಕ್ಷಕ ವೇದಮೂರ್ತಿ, ಪುತ್ತೂರು ಉಪವಿಭಾಗದ ಎಎಸ್ಪಿ ರಿಷ್ಯಂತ್, ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷರಾದ ಅಬ್ದುಲ್ ಖಾದರ್, ಎಎಸ್ಐ ದುಗ್ಗಪ್ಪ ಗೌಡ, ಸಿಬಂದಿಗಳಾದ ನಾರಾಯಣ, ದಾಮೋದರ್, ಸ್ಕರಿಯ, ಕೃಷ್ಣಪ್ಪ, ಪ್ರಶಾಂತ್ ಶೆಟ್ಟಿ, ಉದಯ ಕುಮಾರ್, ಪ್ರಶಾಂತ್ ರೈ, ಮೋಹನ್, ಲಿಂಗಪ್ಪ ಗೌಡ ಪಾಲ್ಗೊಂಡಿದ್ದರು.