ವಿಜಯಪುರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಗಾಳಿ ಬೀಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ಬಬಲೇಶ್ವರ ತಾ| ಮಮದಾಪುರದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಅವರು ಮತಯಾಚಿಸಿ ಮಾತನಾಡಿದರು.
ಕಳೆದ ಲೋಕಸಭೆ ಚುನಾವಣೆ ವೇಳೆ ಪುಲ್ವಾಮಾ ಮೇಲೆ ದಾಳಿ ಮತ್ತು ಭಾರತ ಕೈಗೊಂಡ ಪ್ರತಿದಾಳಿಯಂಥ ಭಾವನಾತ್ಮಕ ವಿಚಾರಗಳು ಬಿಜೆಪಿಗೆ ವರವಾಗಿದ್ದವು. ಮೋದಿ ಅವರು ನೀಡಿದ್ದ ಕಪ್ಪು ಹಣ ವಾಪಸ್ ತರುವುದು, ಪ್ರತಿಯೊಬ್ಬರ ಅಕೌಂಟಿಗೆ ರೂ. 15 ಲಕ್ಷ ಹಣ ಹಾಕುವುದು, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಯ ಅಚ್ಛೇ ದಿನ್ ಭರವಸೆಗಳು ಈಡೇರಿಲ್ಲ. ಆದರೆ, ಈಗ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿವೆ. 2013-18ರ ಅವಧಿಯಲ್ಲಿ ನಾವು ಕೈಗೊಂಡ ನೀರಾವರಿ ಯೋಜನೆಯಿಂದಾಗಿ ಅಂತರ್ಜಲ ಹೆಚ್ಚಾಗಿದ್ದು, ಇಂದು ರಾಜ್ಯಾದ್ಯಂತ ಭೀಕರ ಬರವಿದ್ದರೂ, ಜಿಲ್ಲೆಯಲ್ಲಿ ಅಷ್ಟೋಂದು ಪರಿಣಾಮ ಬೀರಿಲ್ಲ. ಕಾಂಗ್ರೆಸ್ ಸರಕಾರವಿದ್ಸಾಗ ತೈಲಬೆಲೆ ಕೇವಲ 10 ಪೈಸೆ ಹೆಚ್ಚಳವಾದರೂ ಬಿಜೆಪಿಯ ಸ್ಮೃತಿ ಇರಾನಿ ಮತ್ತು ಶೋಭಾ ಕರಂದ್ಲಾಜೆ ಸೇರಿದಂತೆ ನಾನಾ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರೂ. 50 ಮತ್ತು ಅಡುಗೆ ಅನಿಲ ದರ ರೂ. 800 ರಷ್ಟು ಹೆಚ್ಚಾದರೂ ಅವರು ಮೌನ ವಹಿಸಿದ್ದಾರೆ. ಇವು ಬಿಜೆಪಿ ದೇಶದ ಜನರಿಗೆ ನೀಡಿರುವ ಅಚ್ಛೇ ದಿನ್ ಆಗಿವೆ ಎಂದು ಅವರು ಹೇಳಿದರು.
ಪ್ರಾಮಾಣಿಕರೆಂದು ಹೇಳುತ್ತಿದ್ದವರ ಮುಖವಾಡ ಚುನಾವಣೆ ಬಾಂಡ್ ಖರೀದಿಸಿದವರ ಹೆಸರು ಬಹಿರಂಗವಾದ ನಂತರ ಕಳಚಿ ಬಿದ್ದಿದೆ. ಐಟಿ, ಇಡಿ, ಸಿಬಿಐ ದಾಳಿಗೆ ಒಳಗಾದವರು ಚುನಾವಣೆ ಬಾಂಡ್ ಖರೀದಿ ಮಾಡಿರುವುದು ಈ ಸರಕಾರ ಭ್ರಷ್ಟಾಚಾರಕ್ಕೆ ಹೊಸ ಭಾಷೆ ಬರೆದಿರುವುದಕ್ಕೆ ಸಾಕ್ಷಿಯಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಸ್ಥಾಪಿಸಿದ್ದ ಸಾರ್ವಜನಿಕ ಸಂಸ್ಥೆಗಳನ್ನು ಈಗಿನ ಕೇಂದ್ರ ಸರಕಾರ ಖಾಸಗೀಕರಣ ಮಾಡುತ್ತಿದೆ. ಇಬ್ಬರು ಮಾರಾಟಗಾರರು ಮತ್ತು ಇಬ್ಬರು ಖರೀದಿಗಾರರು ಈ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿದರೆ ಅದು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ ಗಾಂಧಿ, ಎಸ್. ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ ಮತ್ತು ಎಂ. ಬಿ. ಪಾಟೀಲರಿ ಅವರಿಗೆ ಹಾಕಿದಂತೆ. ಅವರಿಗೆ ಮತ ಹಾಕಿ ನಮ್ಮ ಕೈ ಬಲಪಡಿಸಿ. ಈ ಮೂಲಕ ಭಾವೈಕ್ಯತೆ ಕೆಡಿಸಿ ಜನರ ಭಾವನೆ ಹಾಳು ಮಾಡುವವರಿಗೆ ಪಾಠ ಕಲಿಸಿ. ಸಂಸತ್ತಿನ್ಲಲಿ ಒಂದು ಬಾರಿಯೂ ಧ್ವನಿ ಜಿಗಜಿಣಗಿ ಅವರ ಬದಲು ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡಲಿರುವ ಪ್ರೊ. ರಾಜು ಆಲಗೂರ ಅವರಿಗೆ ಮತಹಾಕಿ ಎಂದು ಎಂ. ಬಿ. ಪಾಟೀಲ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಐದು ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ಸಚಿವ ಎಂ. ಬಿ. ಪಾಟೀಲ ಅವರು ಬರದ ನಾಡನ್ನು ಹಸಿರು ಬೀಡನ್ನಾಗಿ ಮಾಡಿದ್ದಾರೆ. ಅಪೂರ್ಣ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ನೀರು ಹರಿಸಿದ್ದಾರೆ. ಇವು ನನ್ನ ಗೆಲುವಿಗೆ ಕಾರಣವಾಗಲಿವೆ. ರಮೇಶ ಜಿಗಜಿಣಗಿ ಕಳೆದ 30 ವರ್ಷಗಳಿಂದ ಸಂಸದರಾಗಿ ಜಿಲ್ಲೆ ಮತ್ತು ರಾಜ್ಯದ ಸಮಸ್ಯೆಗಳ ಬಗ್ಗೆ ಎಂದೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಒಂದೂ ಕಾಮಗಾರಿ ಮಾಡಿಲ್ಲ. ಜನರನ್ನು ಭೇಟಿ ಮಾಡಿಲ್ಲ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿಲ್ಲ. ವಂದೇ ಭಾರತ ರೈಲು ಬಿಡಿಸಿಲ್ಲ. ನನಗೆ ಮತ ಹಾಕಿದರೆ ಲೋಕಸಭೆಯಲ್ಲಿ ವಿಜಯಪುರ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿ, ಇಂಥ ಬರದ ಸಮಯದಲ್ಲಿಯೂ ಮಮದಾಪುರ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿದ್ದು, ರೈತರು ಈಗಲೂ ಕಬ್ಬು ಬೆಳೆಯಲು ಸಚಿವ ಎಂ. ಬಿ. ಪಾಟೀಲ ಅವರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಕಾರಣವಾಗಿವೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಕೆಲಸ ಮಾಡುತ್ತಿರುವ ಅವರ ಅಭಿವೃದ್ಧಿ ಕಾರ್ಯಗಳು ಪ್ರೊ. ರಾಜು ಆಲಗೂರ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಬಾಯಿಗೆ ಬೀಗ ಹಾಕಿಕೊಂಡವರು ಲೋಕಸಭೆಗೆ ಹೋಗಬಾರದು. ಬುದ್ಧ, ಬಸವ, ಅಂಬೇಡ್ಕರ ತತ್ವಗಳನ್ನು ಅಳವಡಿಸಿಕೊಂಡಿರುವ ಪ್ರೊ. ರಾಜು ಆಲಗ ಅವರು ಲೋಕಸಭೆಯಲ್ಲಿ ನಮ್ಮೆಲ್ಲರನ್ನು ಪ್ರತಿನಿಧಿಸಬೇಕು. ಅವರಿಗೆ ನಾವೆಲ್ಲರೂ ಮತ ಹಾಕಿ ಗೆಲ್ಲಿಸೋಣ ಎಂದು ಹೇಳಿದರು.
ಜಿ. ಪಂ. ಮಾಜಿ ಅಧ್ಯಕ್ಷರಾದ ವಿ. ಎಸ್. ಪಾಟೀಲ, ಬಸವರಾಜ ದೇಸಾಯಿ, ಮುಖಂಡರಾದ ಮೌಲಾಸಾಬ ಜಹಾಗಿರದಾರ, ಎಂ. ಕೆ. ಕುಲಕರ್ಣಿ, ಕುಮಾರ ದೇಸಾಯಿ, ರಫೀಕ ಖಾನೆ ಈ ಸಂದರ್ಭದಲ್ಲಿ ಮಾತನಾಡಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣಾಜಿ ಕುಲಕರ್ಣಿ, ಕಲ್ಲನಗೌಡ ಪಾಟೀಲ, ವಿ. ಎಚ್. ಬಿದರಿ, ಈರಣ್ಣ ಕೊಪ್ಪದ, ಆಶಾ ಕಟ್ಟಿಮನಿ, ಸುಮಿತ್ರಾ ಶಿರಬೂರ, ರೇಶ್ಮಾ ಮಲ್ಲಿಕಾರ್ಜುನ ಗಂಗೂರ, ಸುಖದೇವ ಕಟ್ಟಿಮನಿ, ರಮೇಶ ಜೈನಾಪೂರ, ಬಸವನಗೌಡ ಪಾಟೀಲ, ಕೌಸರ ನಿಯಾಜ ಅತ್ತಾರ, ಶೇಖು ಪೂಜಾರಿ, ಎಸ್. ಕೆ. ನಿಡೋಣಿ, ಬಸವರಾಜ ಮಲಕಗೊಂಡ, ಮಹಾದೇವ ಕಂತಿ, ಎಂ. ಎಂ. ಬಾಗವಾನ, ರೇಶ್ಮಾ, ಬಸಪ್ಪ ಬಾವಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.