ಹೊಸಪೇಟೆ: ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆಯ ಅಂಗವಾಗಿ ಭಾನುವಾರದಿಂದ ಪ್ರಾರಂಭವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊಸಪೇಟೆಯ ಬಯಲಾಟ ತಂಡ ʼಸಂಪೂರ್ಣ ರಾಮಾಯಣʼದ ಯಶಸ್ವಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿತು.
ಕಿಷ್ಕಿಂಧೆಯ ಭಾಗವಾಗಿರುವ ಹೊಪೇಟೆಯ ತಂಡ ಕನ್ನಡದಲ್ಲೇ ಪ್ರಸ್ತುತಪಡಿಸಿದ ನಾಟಕವನ್ನು ಪ್ರೇಕ್ಷಕರು ಮೆಚ್ಚಿದ್ದು, ಕಲಾವಿದರ ವೇಷ, ಹಾಡುಗಾರಿಕೆ, ತಾಳವಾದ್ಯಗಳನ್ನು ಆನಂದಿಸಿದರು.
ʼಅಯೋಧ್ಯೆಯಲ್ಲಿ ಭಾರಿ ಚಳಿ ಇದ್ದರೂ ಅದು ಕಲಾವಿದರ ಉತ್ಸಾಹಕ್ಕೆ ಹಾಗು ಪ್ರದರ್ಶನಕ್ಕೆ ಅಡ್ಡಿಪಡಿಸಲಿಲ್ಲʼ ಎಂದು ತಂಡದ ಮುಖ್ಯಸ್ಥ ಕೆ.ಎಸ್.ಸತ್ಯನಾರಾಯಣ ಅವರ ಸಹೋದರ ರಾಘವೇಂದ್ರ ತಂಡದವರ ಪ್ರತಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡಿದ ಅವರು, ʼದೇಶದ ಬೇರೆಬೇರೆ ಭಾಗಗಳಿಂದ ಬಂದಿರುವ ತಂಡಗಳ ಜೊತೆ ನಮ್ಮ ರಾಜ್ಯಕ್ಕೂ ಅವಕಾಶ ಸಿಕ್ಕಿದ್ದು, ಬುಧವಾರದ ನಾಲ್ಕನೆಯ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಗುವ ನಿರೀಕ್ಷೆ ಇದೆ ಹಾಗು ಈ ಕೊನೆಯ ಪ್ರದರ್ಶನದ ನಂತರ ತಂಡದ ಸಮೇತ ರಾಜ್ಯಕ್ಕೆ ಹಿಂದಿರುಗಲಿದ್ದೇವೆʼ ಎಂದರು.
ತಂಡದ ಮುಖ್ಯಸ್ಥ ಸತ್ಯನಾರಾಯಣ ರಾಮನ ಪಾತ್ರ ಮಾಡಿದರೆ, ಜ್ಯೋತಿ ಸೀತೆಯ ಪೋಷಾಕಿನಲ್ಲಿ ಕಾಣಿಸಿಕೊಂಡರು. ಉಳಿದ ಕಲಾವಿದರು ಪರಶುರಾಮ (ಲಕ್ಷ್ಮಣ), ವಿರೂಪಾಕ್ಷಯ್ಯ(ಹನುಮಂತ), ಚನ್ನಬಸವ(ರಾವಣ), ಶಂಕರ(ಸುಗ್ರೀವ), ಮಹೇಶ(ಶೂರ್ಪನಖಿ), ಬಿ.ಶಿವಪ್ಪ(ಸಾರಥಿ) ಪಾತ್ರ ನಿರ್ವಹಿಸಿದರು.