ಕಲಬುರಗಿ: ಬಜೆಪಿಗರು ನನ್ನ ಹೆಣದ ಮೇಲೆ ಚುನವಣೆ ನಡೆಸಲು ಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಮುಗಿಸುವುದಾಗಿ ಕೊಲೆ ಬೆದರಿಕೆ ಪತ್ರ ಬರೆಯಲಾಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಆರೋಪ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ನನ್ನ ಹಾಗೂ ನನ್ನ ಕುಟುಂಬವಲ್ಲದೆ ದಲಿತ ಬಲಗೈ ಎಡಗೈ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿ ಬರೆಯಲಾದ ಪತ್ರವಾಗಿದೆ ಎಂದು ಆರೋಪ ಮಾಡಿದರು.
ಪತ್ರದ ಒಕ್ಕಣೆ, ಬಳಕೆ ಮಾಡಿರುವ ಭಾಷೆ ಹಾಗೂ ಉದ್ದೇಶಗಳು ಮನುವಾದಿಗಳ ಮತ್ತು ಅಂತಹದೇ ಸಂಘಟನೆಗಳ ಸಂಯೋಜಿತ ಮತ್ತು ಉದ್ದೇಶದ ಕೃತ್ಯವಾಗಿರಬಹುದು ಎಂದು ಅವರು ಗಂಭೀರವಾಗಿ ಆರೋಪ ಮಾಡಿದರು.
ಇಡೀ ಪತ್ರದಲ್ಲಿ ದಲಿತರ ಅಸ್ಮಿತೆಯನ್ನು ಕೆಣಕಿರುವ ಕುಚೋದ್ಯರು ನನ್ನನ್ನು ಹಾಗೂ ನನ್ನ ತಾಯಿ ಮತ್ತು ಪತ್ನಿಯ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಅಲ್ಲದೆ ತುಂಬಾ ಕೆಟ್ಟ ಪದಗಳಲ್ಲಿ ನಿಂದಿಸಿ ನಮ್ಮನ್ನು ಮುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಈಗಾಗಲೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದರು.
ಲೋಕಸಭೆ ಚುನಾವಣೆ ವೇಳೆಯಲ್ಲಿ ಬಿಜೆಪಿಗರು ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ವೈಯಕ್ತಿಕ ದಾಳಿಗಳನ್ನು ಮಾಡುತ್ತಿದ್ದಾರೆ. ರಾಜಕಾರಣದ ಎಂತಹದೇ ದಾಳಿಗೆ ನಾನು ಉತ್ತರ ಕೊಡಲು ಸಿದ್ದ. ನನ್ನನ್ನು ಪಕ್ಷದ ಸಾಮಾಜಿಕ ಜಾಲತಾಣ ಹಾಗೂ ಸಂವಹನಕಾರನಾಗಿನಿಯೋಜನೆ ಮಾಡಲಾಗಿದೆ. ಇದರಿಂದಾಗಿ ನಾನು ಪಕ್ಷದ ವಿರುದ್ಧ ಮಾತನಾಡುವವರ ಮತ್ತು ವಿರೋಧ ಪಕ್ಷದ ದಾಳಿಗೆ ಪ್ರತಿಯೊಂದುಕ್ಕೂ ಉತ್ತರ ಕೊಡಲು ನಾನು ಸಂಯೋಜಿತನಾಗಿದ್ದೇನೆ ಆದರೆ, ಬಿಜೆಪಿ ನಾಯಕರು ವೈಯಕ್ತಿಕವಾಗಿ ಯಾಕೆ ದಾಳಿ ಮಾಡಲಾಗುತ್ತಿದೆ ಎಂದು ಆರೋಪಮಾಡಿದರು.
ಅಲ್ಲದೆ, ಪತ್ರ ಬಂದಿರುವುದಕ್ಕೂ ಮತ್ತು ಹಾಲಿ ಸಂಸದ ಉಮೇಶ್ ಜಾದವ್ ಅವರ ಆರೋಪಗಳಿಗೆ ಸಮೀಕರಿಸಿದ ಅವರು, ಸಂಘ ಪರಿವಾರದ ಶಕ್ತಿಗಳ ಕೈವಾಡ ಇರಬಹುದು ಎಂದು ಆರೋಪ ಮಾಡಿದರು.
ಕಳೆದ ಹಲವು ದಿನಗಳಿಂದ ಹಾಲಿ ಸಂಸದ ಜಾಧವ್ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಭಯ ಮುಕ್ತ ಮತ್ತು ಪ್ರಾಮಾಣಿಕ ಚುನಾವಣೆ ನಡೆಯಬೇಕು ಎಂದು ಪದೇ ಪದೇ ಉಲ್ಲೇಖಿಸುತ್ತಿದ್ದರು. ಜಿಲ್ಲೆಯಲ್ಲಿ ಎಲ್ಲಿ ಕಾನೂನು ಕುಸಿದಿದೆ ಎಂದು ಪ್ರಶ್ನಿಸಿದರು. ಹಿಂದೆಯೂ ಚಿತ್ತಾಪುರ ವಿಧಾನಸಭೆಗೆ ನಡೆದ ಚುನಾವಣೆ ವೇಳೆ ಕೂಡ ನನ್ನ ಹಾಗೂ ನನ್ನ ಪತ್ನಿಯ ವಿರುದ್ಧ ಹಾಗೂ ಕುಟುಂಬದ ವಿರುದ್ಧ ಬಿಜೆಪಿ ಅಭ್ಯರ್ಥಿ ಮಣಿಕಂಠ ಹೀನಾಯವಾಗಿ ನಿಂದಿಸಿದ್ದಲ್ಲದೆ ಆಗಲೂ ಕೂಡ ಮುಗಿಸುವುದಾಗಿ ಖುಲ್ಲಂ ಖುಲ್ಲಾ ಹೇಳಿಕೆ ನೀಡಲಾಗಿತ್ತು. ಆದರೆ ಬಿಜೆಪಿ ಅದ್ಯಾವುದಕ್ಕೂ ವಿರೋಧ ವ್ಯಕ್ತಪಡಿಸಿಲ್ಲ, ವಿಷಾದವು ವ್ಯಕ್ತಪಡಿಸಿಲ್ಲ ಎಂದರೆ ಬಿಜೆಪಿಯ ಮನಸ್ಥಿತಿ ಅರ್ಥವಾಗುತ್ತದೆ ಎಂದು ಅವರು ಕಿಚಾಯಿಸಿದರು. ಅಂತಹದೇ ತಂತ್ರವನ್ನು ಹೀಗೂ ಅನುಸರಿಸಲು ಮತ್ತು ನಮ್ಮ ಕುಟುಂಬವನ್ನು ಭಯದಲ್ಲಿ ಇಡಲು ಯೋಜಿಸಲಾಗಿದೆ ಎಂದ ಅವರು ದಲಿತ ಎಡಗೈ ಬಲಗೈ ಸಮುದಾಯವನ್ನು ಈ ಮುಖೇನ ಅಂಜಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಆರೋಪ ಮಾಡಿದರು ಆದರೆ ಇಂತಹ ಆರೋಪಗಳಿಗೆ ನಾನಾಗಲಿ ನನ್ನ ಕುಟುಂಬವಾಗಲಿ ಹೆದರುವುದಿಲ್ಲ ಬುದ್ಧ ಬಸವ ಅಂಬೇಡ್ಕರ್ ಅವರ ಎಲ್ಲ ಭಾವನೆಗಳನ್ನು ನಾವು ಹೊಂದಿದ್ದೇವೆ ಆದ್ದರಿಂದ ನಾವು ತಕ್ಕ ಉತ್ತರವನ್ನು ನೀಡಲು ಸಜ್ಜಾಗಿದ್ದೇವೆ ಎಂದರು.