ಕಲಬುರಗಿ: ಸತತ ಏಳು ದಿನಗಳಿಂದ ತುತ್ತು ಅನ್ನ ಸೇವಿಸದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಶಿವಕುಮಾರ ನಾಟಿಕಾರ ಅವರ ಆರೋಗ್ಯದಲ್ಲಿ ಏರುಪೇರು ಕಾಣುತ್ತಿದ್ದರೂ, ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಭೀಮಾ ನದಿಯ ಅವಲಂಬಿತ ರೈತರಿಗೆ ಜನ ಜಾನುವಾರುಗಳಿಗೆ ನೀರು ಹರಿಸಲು ದಿಟ್ಟ ಹೆಜ್ಜೆಯನ್ನಿಟ್ಟು ಮುನ್ನಡೆಯುತ್ತಿದ್ದಾರೆ.
ದಿನನಿತ್ಯ ರಾಜಕೀಯ ಮುಖಂಡರು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರೂ ಭೀಮಾ ನದಿಗೆ ನೀರು ಹರಿಯುವವರೆಗೆ ನಾನು ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಗಟ್ಟಿಯಾಗಿ ಹಠ ಹಿಡಿದು ಕುಳಿತಿರುವುದು ಸಾಮಾಜಿಕ ನ್ಯಾಯಕ್ಕಾಗಿ ಮಿಡಿಯುವ ಮಾನವೀಯ ಮೌಲ್ಯಗಳನ್ನು ಎತ್ತಿತೊರುತ್ತದೆ.ಈ ಮೊದಲು ಜಿಲ್ಲಾಧಿಕಾರಿಗಳ ನಿಯೋಗ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಕೈಬಿಡುವಂತೆ ನಡೆದ ಪ್ರಯತ್ನಗಳು ವಿಫಲವಾಗಿವೆ.
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಯುವ ಮುಖಂಡ ರಿತೇಶ ಗುತ್ತೇದಾರ ಕುಡಿಯುವ ನೀರಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದು ನಿಜಕ್ಕೂ ಪ್ರಶಂಸೆಗೆ ಮೀರಿದ್ದಾಗಿದೆ. ಶಿವಕುಮಾರ ನಾಟಿಕಾರ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರು ಆಗದಿರಲಿ. ಅವರ ಹೋರಾಟಕ್ಕೆ ಜಯ ಸಿಕ್ಕೆ ಸಿಗುತ್ತದೆ ಅವರೊಂದಿಗೆ ನಾವು ಯಾವತ್ತು ಇರುತ್ತೆವೆ ಎಂದರು. ನಾವು ಹೋರಾಟಗಳನ್ನು ನೋಡಿದ್ದೆವೆ, ಆದರೆ ಇಂತಹ ಸುಡುವ ಬಿಸಿಲಿನಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೆ ಜನರಿಗೆ ನೀರು ಒದಗಿಸಿಕೊಡಬೇಕು ಎನ್ನುವ ನಾಟಿಕಾರ ಅವರ ಹೋರಾಟ ಅವಿಸ್ಮರಣೀಯವಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಮುಖಂಡರಾದ ಶಿವು ಮಾಸ್ತಾರ ಸೊನ್ನ, ಶಿವು ಗಾಣೂರ, ಶೈಲೇಶ ಗುಣಾರಿ, ಸುರೇಶ ಹಲಸಂಗಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.