ಕಲಬುರಗಿ: ಬಿಸಿಲ ಝಳದ ಜೊತೆಗೆ ಜಿಲ್ಲೆಯಾದ್ಯಂತ ಚುನಾವಣಾ ಕಾವೂ ಏರುತ್ತಿದೆ. ಈ ಬಾರಿ ಹೇಗಾದರೂ ಮಾಡಿ ತಮ್ಮ ಪತಿ ಆಯ್ಕೆಯಾಗಬೇಕು ಎಂಬ ಹಂಬಲದಿಂದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪತ್ನಿಯರು ನಿತ್ಯ ಪ್ರಚಾರ ನಡೆಸಿದ್ದಾರೆ.
ಬೆಳಿಗ್ಗೆ ಮತ್ತು ಸಂಜೆ ಆಯಾ ಪಕ್ಷಗಳ ಮಹಿಳಾ ಕಾರ್ಯಕರ್ತರೊಂದಿಗೆ ಕ್ಷೇತ್ರ ವ್ಯಾಪ್ತಿಯ ಬಡಾವಣೆಗಳಿಗೆ ತೆರಳಿ ಕೈಮುಗಿದು ಮತಯಾಚನೆ ನಡೆಸಿದ್ದಾರೆ. ಅಭ್ಯರ್ಥಿಗಳು ಒಂದು ಬಡಾವಣೆ, ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿದ್ದರೆ, ಅವರ ಪತ್ನಿಯರು ಬೇರೊಂದು ಕಡೆ ತೆರಳಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಸಂಭವನೀಯ ಅಭ್ಯರ್ಥಿಗಳ ಪತ್ನಿಯರು ಹಾಗೂ ಮಕ್ಕಳು ತಿಂಗಳ ಹಿಂದಿನಿಂದಲೇ ಒಂದು ಬಾರಿ ಕ್ಷೇತ್ರವನ್ನು ಸುತ್ತಾಡಿ ಮತಬೇಟೆಯನ್ನು ಮುಗಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಮತ್ತೊಂದು ಸುತ್ತಿನ ಪ್ರಚಾರ ಶುರು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕೆಕೆಆರ್ಡಿಬಿ ಅಧ್ಯಕ್ಷ, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ಅವರ ಪತ್ನಿ ಲಕ್ಷ್ಮಿ ಪಾಟೀಲ ರೇವೂರ ಅವರು ನಗರದ ವಿವಿಧ ವಾರ್ಡ್ಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಮಹಿಳಾ ಮತದಾರರನ್ನು ಭೇಟಿ ಮಾಡಿ ಪತಿಯ ಪರ ಪ್ರಚಾರ ನಡೆಸುತ್ತಿದ್ದು, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಲಕ್ಷ್ಮಿ ಅವರೊಂದಿಗೆ ಸಾಥ್ ನೀಡುತ್ತಿದ್ದಾರೆ. ಪ್ರತಿದಿನ ರಾತ್ರಿ ಒಂದು ಸುತ್ತು ಸಭೆ ನಡೆಸಿ ಮರುದಿನ ಯಾವ ಬಡಾವಣೆಗಳಲ್ಲಿ ಸಂಚರಿಸಬೇಕು ಎಂಬ ನೀಲನಕ್ಷೆಯನ್ನು ಸಿದ್ಧಪಡಿಸಿಕೊಂಡು ಕಾರ್ಯಾಚರಣೆಗೆ ಇಳಿಯುತ್ತಿದ್ದಾರೆ.
ಕೆಕೆಆರ್ಟಿಸಿ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಪತ್ನಿ ಸಂತೋಷಿ ಪಾಟೀಲ, ಮಾಜಿ ಶಾಸಕ ಡಾ. ಶರಣಪ್ರಕಾಶ ಪಾಟೀಲ ಪತ್ನಿ, ಸ್ತ್ರೀರೋಗ ತಜ್ಞೆಯಾಗಿರುವ ಡಾ. ಭಾಗ್ಯಶ್ರೀ ಪಾಟೀಲ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಪತ್ನಿ ಸವಿತಾ ಸಿಂಗ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಪತ್ನಿ ಜಯಶ್ರೀ ಮತ್ತಿಮಡು, ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಪತ್ನಿ ಪ್ರೇಮಲತಾ ಪಾಟೀಲ, ಚಿಂಚೋಳಿ ಜೆಡಿಎಸ್ ಅಭ್ಯರ್ಥಿ ಸಂಜೀವನ ಯಾಕಾಪುರ ಪತ್ನಿ ಶಕುಂತಲಾ ಸೇರಿದಂತೆ ಪ್ರಮುಖ ಅಭ್ಯರ್ಥಿಗಳ ಪತ್ನಿಯರು ಬಿಸಿಲಿನಲ್ಲಿ ಬೆವರು ಸುರಿಸುತ್ತಲೇ ಕ್ಷೇತ್ರಗಳನ್ನು ಸುತ್ತಾಡುತ್ತಿದ್ದಾರೆ.