ಕಲಬುರಗಿ: ಶಾಸಕ ಬಿ.ಆರ್. ಪಾಟೀಲ ಪ್ರಧಾನ ಮಂತ್ರಿ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಬಿಜೆಪಿ ಮಂಡಲ ಘಟಕ ದೂರು ಸಲ್ಲಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಶಾಸಕರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದೂಗಳ ಬಗ್ಗೆ ನೀಡಿರುವ ಹೇಳಿಕೆ ಅವರ ದಿವಾಳಿತನವನ್ನು ಎತ್ತಿ ತೋರಿಸುತ್ತದೆ.
ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನ ಸಂದರ್ಭದಲ್ಲಿ ಅವರು ಪ್ರಧಾನಿ ಮೋದಿಯವರ ಕಾರ್ಯಕ್ಷಮತೆ ಬಗ್ಗೆ ಮಾತನಾಡುತ್ತಾ ಫುಲ್ವಾಮಾ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪ್ರಧಾನಿಯವರ ಮೇಲೆ ಸುಳ್ಳು ಆಪಾದನೆಗಳನ್ನು ಮಾಡುತ್ತಾ ಆಧಾರ ರಹಿತವಾಗಿ ಟೀಕೆ ಮಾಡಿದ್ದಾರೆ. ಇದನ್ನು ಖಂಡಿಸುವುದಾಗಿ ಹೇಳಿದರು. ಕಾಂಗ್ರೆಸ್ ಆಂತರಿಕ ಕಚ್ಚಾಟವನ್ನು ಮರೆಮಾಚುವ ದುರುದ್ದೇಶದಿಂದ ಫುಲ್ವಾಮಾ ದಾಳಿಯನ್ನು ಸತ್ಯಪಾಲ ಮಲ್ಲಿಕರ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದ್ದಾರೆ. ಆದರಿಂದ ಇಬ್ಬರ ಮೇಲೂ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಶಾಸಕರು ಬಿಜೆಪಿಯನ್ನು ದ್ವೇಷಿಸುವ ಭರದಲ್ಲಿ ದೇಶದ ಭದ್ರತೆ ಮತ್ತು ಸುರಕ್ಷತೆಯನ್ನು ಅಪಮಾನಗೊಳಿಸಿ ಸೈನಿಕರಿಗೆ ದೇಶವಾಸಿಗಳಿಗೆ ಅವಮಾನ ಮಾಡಿದ್ದಾರೆ. ಸೈನಿಕರ ಮತ್ತು ದೇಶದ ಜನರ ಬಳಿ ಬಹಿರಂಗ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಅವರ ವಿರುದ್ಧ ಜನಾಂದೋಲನ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅ.2ರಂದು ಕಲಬುರಗಿ ಮಹಾತ್ಮಾ ಗಾಂಧಿಜಿಯವರ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ನಶೆ ಮುಕ್ತ ಭಾರತ ಆಂದೋಲನದಲ್ಲಿ ಶಾಸಕರು ಸಾರಾಯಿ ಬಗ್ಗೆ ಹೇಳಿರುವುದು ಅವರ ಡೋಂಗಿತನ ಎತ್ತಿ ತೋರಿಸುತ್ತಿದೆ. ಅಂಗಡಿ ತೆರೆಯಲು ಶಿಫಾರಸ್ಸು ಪತ್ರ ನೀಡುವವರು ಇವರೆ, ಸಾರಾಯಿ ವಿರುದ್ಧ ಭಾಷಣ ಮಾಡುವವರು ಇವರೆ ಆಗಿದ್ದಾರೆ. ಇವರನ್ನು ನಂಬುುದು ಹೇಗೆಂದು ಪ್ರಶ್ನಿಸಿದರು.
ಶಾಸಕರಿಗೆ ಅಭಿವೃದ್ಧಿಯ ಮೇಲೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಸರ್ಕಾರದ ಹೊಸ ಅನುದಾನ ತಂದು ಕಾಮಗಾರಿಗಳ ಮಾಡಬೇಕು ಎಂದು ಅವರು ಒತ್ತಾಯಿಸಿದ ಅವರು, ರುದ್ರವಾಡಿಯಲ್ಲಿ ಎಂಎಸ್ಐ ಅಂಗಡಿ ತೆರೆಯುವಂತೆ ಹಾಗೂ ಗುತ್ತೇದಾರ ಅವಧಿಯಲ್ಲಿನ ಕಾಮಗಾರಿಗಳ ಬದಲಾವಣೆ ದಾಖಲೆಗಳನ್ನು ಇದೇ ವೇಳೆ ಅವರು ಬಿಡುಗಡೆ ಮಾಡಿದರು. ಬಿಜೆಪಿ ಮಂಡಲಿ ಅಧ್ಯಕ್ಷ ಆನಂದ ಪಾಟೀಲ, ಮಲ್ಲಿನಾಥ ಪರೆಣಿ ಇತರರು ಇದ್ದರು.