ಕಲಬುರಗಿ: ಸ್ವಚ್ಚ ಸರ್ವೇಕ್ಷಣ, ಸ್ವಚ್ಛ ಭಾರತ ಹಾಗೂ ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ನಗರದ ಜನತೆಯಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಕಲಬುರಗಿ ಮಹಾನಗರ ಪಾಲಿಕೆಯು ಸೋಮವಾರ ಬೆಳಿಗ್ಗೆ ನಗರದಲ್ಲಿ ಆಯೋಜಿಸಿದ ಮ್ಯಾರಾಥಾನ್ ಓಟಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಹಸಿರು ಕಲಬುರಗಿ ಜಾಗೃತಿಗೆ ಕಲಬುರಗಿ ಕೋಟೆಯಿಂದ ಆರಂಭಗೊಂಡ ಓಟ ಜಗತ್ ವೃತ್ತ-ಅನ್ನಪೂರ್ಣ ಕ್ರಾಸ್-ಖರ್ಗೆ ಪೆಟ್ರೋಲ್ ಪಂಪ್ ಮಾರ್ಗವಾಗಿ ಟೌನ್ ಹಾಲ್ ಬಳಿ ಕೊನೆಗೊಂಡಿತು.
ಸುಮಾರು 600 ಪುರುಷ ಮತ್ತುಮಹಿಳಾ ವಿದ್ಯಾರ್ಥಿಗಳು, ನೌಕರರು, ಕ್ರೀಡಾಪಟುಗಳು, ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.
ಪುರಷರಿಗೆ ಆಯೋಜಿಸಿದ 6.5 ಕಿ.ಮೀ ಓಟದ ಸ್ಪರ್ಧೆಯಲ್ಲಿ ಚೇತನ ತಿರುಪತಿ ಪ್ರಥಮ, ಮಲ್ಲಿಕಾರ್ಜುನ ಎರಡನೇ ಹಾಗೂ ಸೋಹೆಲ್ ನದಾಫ್ ಮೂರನೇ ಸ್ಥಾನ ಪಡೆದರು. 5.5 ಕಿ.ಮೀ ಓಟದ ಮಹಿಳಾ ವಿಭಾಗದಲ್ಲಿ ರಜನಿ ಬಿ. ಮೊದಲನೇ ಸ್ಥಾನ ಪಡೆದರು. ರಂಜನಾ ರಮೇಶ ಎರಡನೇ ಸ್ಥಾನ ಪಡೆದರೆ ಸ್ನೇಹಾ ಆರ್. ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು.
ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಮೊದಲನೇ ಸ್ಥಾನ ಪಡೆದವರಿಗೆ 15 ಸಾವಿರ ರೂ, ಎರಡನೇ ಸ್ಥಾನ ಪಡೆದವರಿಗೆ 10 ಸಾವಿರ ರೂ. ಹಾಗೂ ಮೂರನೇ ಸ್ಥಾನ ಗಳಿಸಿದವರಿಗೆ 7.5 ಸಾವಿರ ರೂ. ನಗದು ಹಣ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಪಾಲಿಕೆಯಿಂದ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ನಗರದ ಮಣ್ಣೂರ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಪ್ರಾಯೋಜಕತ್ವರು ಸಹಯೋಗ ನೀಡಿದರು.
ವಿಧಾನ ಪರಿಷತ್ತಿನ ಶಾಸಕ ಶಶೀಲ ಜಿ. ನಮೋಶಿ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀಷ್ ಶಶಿ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು ಸೇರಿದಂತೆ ಪಾಲಿಕೆ ಅಧಿಕಾರಿಗಳು ಇದ್ದರು.