ಕಲಬುರಗಿ ಜಿಲ್ಲೆ: ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ 12.20ಕ್ಕೆ ಭೂಮಿಯಿಂದ ಸದ್ದು ಕೇಳಿ ಬಂದಿದೆ.ಕಳೆದ ಕೆಲ ದಿನಗಳಿಂದ ಭೂಮಿಯಿಂದ ಸದ್ದು ಬರುವುದು ನಿಂತಿತ್ತು. ಆದರೆ ಸೋಮವಾರ ಮತ್ತೆ ಲಘು ಕಂಪನ ಸಂಭವಿಸಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಯಿತು.
ಜನರು ಮಲಗಿದಾಗ ರಾತ್ರಿ ಸದ್ದು ಕೇಳಿ ಬಂದಿದೆ. ಇದರಿಂದ ಜನ ಮನೆಗಳಿಂದ ಹೊರ ಬಂದಿದ್ದಾರೆ ಎಂದು ಗ್ರಾಮದ ಮುಖಂಡ ಸಂತೋಷಕುಮಾರ ಬಳಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಅಕ್ಟೋಬರ್ ತಿಂಗಳಲ್ಲಿ ಭೂಕಂಪನ ದಾಖಲಾದ ಮೇಲೆ ಜನರಲ್ಲಿ ಭೀತಿ ಹೆಚ್ಚಾಗಿತ್ತು ಕಂಪನ ಅಧ್ಯಯನಕ್ಕೆ ಗ್ರಾಮದಲ್ಲಿ ವಿಜ್ಞಾನಿಗಳು ಸಿಸ್ಮೊಗ್ರಾಮ್ ಅಳವಡಿಸಿ ಅಧ್ಯಯನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ತಾತ್ಕಾಲಿಕವಾಗಿ ಅಳವಡಿಸಿದ್ದ ಶೆಡ್ ಗಳನ್ನು ಗುತ್ತಿಗೆದಾರರು ಕಿತ್ತುಕೊಂಡು ಹೋಗಿದ್ದಾರೆ. ಗ್ರಾಮದಲ್ಲಿ ಜನರಿಗೆ ವೈಯಕ್ತಿಕ ಶೆಡ್ ನಿರ್ಮಿಸಲು ₹ 3 ಕೋಟಿ ಮಂಜೂರಾಗಿದೆ. ಆದರೆ ಇನ್ನೂ ಕೆಲಸ ಪ್ರಾರಂಭವಾಗಬೇಕಿದೆ.