ಕಲಬುರಗಿ: ಬೆಂಗಳೂರು ನಗರದ ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ಸಂಭವಿಸಿದ ಪಟಾಕಿ ಅವಘಡಗಳ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಪಟಾಕಿ ಅಂಗಡಿಗಳ ತೆರೆಯಲು ಮಾಲೀಕರು ಸೂಕ್ತ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ.ಸೂಚಿಸಿದ್ದಾರೆ.
ಸ್ಫೋಟಕ ನಿಯಮಗಳು-2008ರ ಅನ್ವಯ ಪಟಾಕಿ ಉತ್ಪಾದನೆ, ಸಂಗ್ರಹಣೆ, ಸಾಗಾಣಿಕೆ ಹಾಗೂ ಮಾರಾಟ ನಿಯಮಗಳನ್ನು ಎಲ್ಲರು ಚಾಚೂತಪ್ಪದೆ ಪಾಲಿಸಬೇಕು. ಇದನ್ನು ಉಲ್ಲಂಘಿಸಿದವರ ವಿರುದ್ಧ ಪಿಎಸ್ಐ ದರ್ಜೆಯ ಮೇಲ್ಪಟ್ಟ ಅಧಿಕಾರಿಗಳು ಸ್ಫೋಟಕ ವಸ್ತು ವಶಪಡಿಸಿಕೊಳ್ಳಲು, ಬಂಧಿಸಲು ಹಾಗೂ ಸ್ಫೋಟಕ ವಸ್ತುಗಳನ್ನು ತೆಗೆದು ಹಾಕುವ ಅಧಿಕಾರ ಹೊಂದಿರುತ್ತಾರೆ. ಅಂಗಡಿ, ಗೋದಾಮುಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರ ಮತ್ತು 11 ತಾಲ್ಲೂಕುಗಳ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡವು ಅಂಗಡಿ-ಗೋದಾಮುಗಳಿಗೆ ಭೇಟಿ ನೀಡಿದಾಗ ಸಹಕರಿಸಬೇಕು ಎಂದಿದ್ದಾರೆ.