ಮೈಸೂರು: ದಸರಾ ಜಂಬೂಸವಾರಿಗೆ ಗಜಪಡೆ ಮತ್ತು ಅಶ್ವರೋಹಿ ಪಡೆಯನ್ನು ಸಜ್ಜುಗೊಳಿಸುವ ಕಾರ್ಯ ಮುಂದುವರೆದಿದ್ದು ಅದರ ಪ್ರಮುಖ ಭಾಗವಾಗಿರುವ ಸಿಡಿಮದ್ದಿನ ತಾಲೀಮು ನಡೆಯುತ್ತಿದ್ದು, ಇದೀಗ ಸಿಡಿಮದ್ದಿನ ಎರಡನೇ ತಾಲೀಮಿನಲ್ಲಿ ಗಜಪಡೆ ಮತ್ತು ಅಶ್ವದಳದ ಕುದುರೆಗಳು ಬೆದರದೆ ನಿಂತಿದ್ದು ಗಜಪಡೆ ಸಜ್ಜಾಗಿದೆ ಎಂಬುದನ್ನು ಸೂಚಿಸಿದೆ.
ದಸರಾ ವಸ್ತುಪ್ರದರ್ಶನ ಆವರಣದ ಪಾರ್ಕಿಂಗ್ ಜಾಗದಲ್ಲಿ ಶುಕ್ರವಾರ ಸಂಜೆ ನಡೆದ ಎರಡನೇ ಸುತ್ತಿನ ಸಿಡಿಮದ್ದು ತಾಲೀಮಿನಲ್ಲಿ ಗಜಪಡೆ ಸ್ವಲ್ಪವೂ ಅಂಜದೆ ಧೈರ್ಯವಾಗಿ ನಿಂತರೆ ಅಶ್ವಪಡೆಯ ಕೆಲವು ಕುದುರೆಗಳು ಬೆಚ್ಚಿದ್ದು ಕಂಡು ಬಂತು. ಅಂಬಾರಿ ಆನೆ ಅಭಿಮನ್ಯು ನೇತೃತ್ವದ 9 ಆನೆಗಳು, 27 ಆಶ್ವಗಳಿಗೆ 7 ಫಿರಂಗಿಗಳಲ್ಲಿ ಮೂರು ಸುತ್ತಿನಂತೆ ಒಟ್ಟು 21 ಕುಶಾಲತೋಪು ಸಿಡಿಸುವ ಮೂಲಕ ಭಾರಿ ಶಬ್ದದ ಪರಿಚಯ ಮಾಡಿಸಲಾಯಿತು.
ಈ ವೇಳೆ ಎಲ್ಲಾ 9 ಆನೆಗಳು ಫಿರಂಗಿಯ ಎದೆ ಝಲ್ ಎನಿಸುವ ಶಬ್ದಕ್ಕೆ ಬೆಚ್ಚದೆ, ಸೊಂಡಿಲು ಎತ್ತಿ ಮುಂದೆ ಚಲಿಸುತ್ತಾ ಧೈರ್ಯ ತೋರಿದವು. ಆದರೆ, ಅಶ್ವದಳದ ಕೆಲ ಕುದುರೆಗಳು ಬೆದರಿ ಅತ್ತಿಂದಿತ್ತ ಕೊಸರಾಡಿದವು. ಅಶ್ವದಳದ ಸಿಬ್ಬಂದಿ ಕುದುರೆಗಳನ್ನು ನಿಯಂತ್ರಿಸಿದರು.
ತಾಲೀಮಿಗೂ ಮುನ್ನ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರಿಂದ ಕುಶಾಲತೋಪು ಸಿಡಿಸುವ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಅನುಮತಿ ಪಡೆದು ವಿಷಲ್ ಊದಿದರು. ಅದರೊಂದಿಗೆ ಕುಶಾಲತೋಪು ತಾಲೀಮು ವಿದ್ಯುಕ್ತವಾಗಿ ಆರಂಭವಾಯಿತು. ಫಿರಂಗಿಗೆ ಸಿಡಿಮದ್ದನ್ನು ಹಾಕಿದ ನಂತರ ಅದಕ್ಕೆ ಬೆಂಕಿ ಹೊತ್ತಿಸಲು ರಂಜಕದ ಪುಡಿಯನ್ನು ಹಾಕಲಾಯಿತು. ಬೆಂಕಿಯನ್ನು ಸಿಬ್ಬಂದಿ ಹಚ್ಚಿದೊಡನೇ ಕುಶಾಲತೋಪುಗಳು ಸಿಡಿದವು. ನಂತರ ಮಿಂಚಿನ ವೇಗದಲ್ಲಿ ನೀರಿನಿಂದ ತೇವಗೊಂಡಿದ್ದ ತೆಂಗಿನನಾರಿನಲ್ಲಿ ಮಾಡಿರುವ ಸಿಂಬವನ್ನು ಬ್ಯಾರಲ್ಗೆ ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಆರಿಸಿ ತೆಗೆಯಲಾಯಿತು. ಇದೇ ವಿಧಾನವನ್ನು ಮೂರು ಬಾರಿ ಸಿಬ್ಬಂದಿ ಮಾಡಿದರು.
ಆನೆಗಳು, ಅಶ್ವಗಳನ್ನು ಸಾಲಾಗಿ ನಿಲ್ಲಿಸಲಾಯಿತು. ಸಿಬ್ಬಂದಿ ವಿಷಲ್ ಊದಿದ ತಕ್ಷಣ ಬೆಂಕಿ ಹಚ್ಚಿದೊಡದೆ ಫಿರಂಗಿಯಿಂದ ಬೆಂಕಿಯುಡೆಯೊಡನೆ ಕಿವಿಗಡಚ್ಚಿಕ್ಕುವ ಶಬ್ದ ಹೊರಹೊಮ್ಮಿತು. ಮೊದಲ ತಾಲೀಮಿನಲ್ಲಿ ಬೆದರಿದ್ದ ಧನಂಜಯ ಈ ಬಾರಿ ಅಲುಗಾಡದೆ ನಿಂತಿದ್ದ. ಕ್ಯಾಪ್ಟನ್ ಅಭಿಮನ್ಯು, ಅರ್ಜುನ ಎಂದಿನಂತೆ ಧೈರ್ಯ ಪ್ರದರ್ಶಿಸಿದರೆ, ಗೋಪಿ, ಭೀಮ, ವರಲಕ್ಷ್ಮಿ ವಿಜಯ, ಮಹೇಂದ್ರ, ಕಂಜನ್ ಸಿಡಿಮದ್ದು ಸಿಡಿಯುತ್ತಿದ್ದಂತೆ ಮುಂದಡಿ ಇಡುತ್ತಿದ್ದವು. 104 ಡೆಸಿಬಲ್ ಶಬ್ದ ಹೊರಹೊಮ್ಮಿದರೂ ಕೊಂಚವೂ ಬೆದರದೆ ತಾಲೀಮನ್ನು ಯಶಸ್ವಿಗೊಳಿಸಿದವು.
ಇನ್ನು ಎರಡನೇ ಸಿಡಿಮದ್ದು ತಾಲೀಮಿಗೆ 5 ಆನೆಗಳು ಗೈರಾದವು. 2ನೇ ತಂಡದಲ್ಲಿ ಆಗಮಿಸಿದ್ದ ಸುಗ್ರೀವ, ಪ್ರಶಾಂತ, ಲಕ್ಷ್ಮಿ, ರೋಹಿತ್ ಮತ್ತು ಹಿರಣ್ಯಾ ಆನೆಗಳು ತಾಲೀಮಿನಲ್ಲಿ ಭಾಗವಹಿಸಿರಲಿಲ್ಲ. ಮೊದಲ ತಾಲೀಮಿನಲ್ಲಿ ರೋಹಿತ್ ಆನೆ ಸಿಡಿಮದ್ದಿನ ಶಬ್ಧಕ್ಕೆ ವಿಚಲಿತನಾಗಿದ್ದ. ಅವನನ್ನು ಸಮಾಧಾನಪಡಿಸಲು ಮಾವುತ, ಕಾವಾಡಿ ಹೈರಾಣಾಗಿದ್ದರು. ಅಲ್ಲದೆ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ಸುಗ್ರೀವ, ಲಕ್ಷ್ಮಿ, ಹಿರಣ್ಯಾ ಆನೆಗಳೂ ಬೆಚ್ಚಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ತಾಲೀಮಿಗೆ ಕರೆ ತಂದಿರಲಿಲ್ಲ.
ಡಿಸಿಎಫ್ ಸೌರಭ್ಕುಮಾರ್ ಮಾತನಾಡಿ, ಕುಶಾಲತೋಪು ಸಿಡಿಸುವ 2ನೇ ಸುತ್ತಿನ ತಾಲೀಮು ಯಶಸ್ವಿಯಾಗಿ ನಡೆದಿದ್ದು, ಎಲ್ಲಾ ಆನೆಗಳು ಧೈರ್ಯ ಪ್ರದರ್ಶಿಸಿವೆ. ತಾಲೀಮಿನಲ್ಲಿ ಮೊದಲ ತಂಡದಲ್ಲಿ ಆಗಮಿಸಿದ್ದ 9 ಆನೆಗಳು ಭಾಗವಹಿಸಿವೆ. ಮೊದಲ ತಾಲೀಮಿನಲ್ಲಿ ಬೆದರಿದ ಕಾರಣ, ಸುರಕ್ಷತೆಯ ದೃಷ್ಟಿಯಿಂದ ಎರಡನೇ ತಂಡದ 5 ಆನೆಗಳನ್ನು ಕರೆತಂದಿಲ್ಲ. ಮೂರನೇ ತಾಲೀಮಿನಲ್ಲಿ ಎಲ್ಲಾ ಆನೆಗಳು ಭಾಗವಹಿಸಲಿವೆ. ಪಟ್ಟದ ಆನೆ, ನಿಶಾನೆ ಆನೆ ಹಾಗೂ ಶ್ರೀರಂಗಪಟ್ಟಣ ದಸರಾಗೆ ಕಳುಹಿಸುವ ಆನೆಯನ್ನು ಆಯ್ಕೆ ಮಾಡಿದ್ದು, ಕೆಲದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿ, ಗಜಪಡೆ, ಅಶ್ವಪಡೆಗೆ ಎರಡನೇ ಸಿಡಿಮದ್ದು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆದಿದೆ. ಅ.17ರಂದು ಮೂರನೇ ಹಾಗೂ ಅಂತಿಮ ತಾಲೀಮು ನಡೆಯಲಿದೆ ಎಂದು ತಿಳಿಸಿದ್ದಾರೆ.