ಕಲಬುರಗಿ: ಹತ್ತು ದಿನಗಳ ಹಿಂದೆ ನಡೆದ ಎಫ್ ಡಿಎ ನೇಮಕಾತಿ ಪರೀಕ್ಷೆ ಅಕ್ರಮ ಕುರಿತಾಗಿ ಸರ್ಕಾರ ಮುಂಜಾಗ್ರತೆ ಕೈಗೊಂಡಿದ್ದರಿಂದಲೇ ಅಕ್ರಮ ನಡೆಯುವಾಗಲೇ ಬಯಲಿಗೆಳೆಯಲಾಗಿದೆ. ಆದರೂ ಪ್ರಕರಣದಲ್ಲಿ ಎಲ್ಲರ ಪಾತ್ರ ಬಯಲಿಗೆ ಬರುವಂತಾಗಲು ಯಾವ ಹಂತದ ತನಿಖೆ ನಡೆಸಬೇಕು ಎಂಬುದನ್ನು ಗೃಹ ಸಚಿವರು ನಿರ್ಧರಿಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 20 ಜನರನ್ನು ಬಂಧಿಸಲಾಗಿದೆ. ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಬಿಜೆಪಿಯವರು ಆರೋಪಿಸಿದಂತೆ ಯಾರನ್ನೂ ರಕ್ಷಿಸುತ್ತಿಲ್ಲ. ಪಿಎಸ್ಐ ಹಗರಣದಲ್ಲಿ ಆಗಿನ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ಆದರೆ ತಮ್ಮ ಸರ್ಕಾರ ಯಾರನ್ನು ರಕ್ಷಿಸುತ್ತಿಲ್ಲ. ಎಲ್ಲ ಆಯಾಮಗಳಿಂದ ಸಮಗ್ರ ತನಿಖೆ ನಡೆಸಲಾಗುವುದು ಎಂದರು.
ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಕಲಬುರಗಿ ನಗರದಲ್ಲೇ ಇದ್ದರೂ ಮಾಹಿತಿ ಅರಿತು ಬಂಧನ ಮಾಡದಿರುವ ನಿಟ್ಟಿನಲ್ಲಿ ಪೊಲೀಸರ ಕಾರ್ಯದಲ್ಲಿ ನಿಜವಾಗಿಯೂ ವೈಪಲ್ಯವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೆ ಅವರ ವಿರುದ್ಧವೂ ತನಿಖೆ ನಡೆಸಲಾಗುವುದು. ಇತ್ತೀಚೆಗೆ ನಡೆದ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಸಹಾಯಕರ ಪರೀಕ್ಷೆ ಸಂದರ್ಭದಲ್ಲಿ ಹೆಣ್ಣು ಮಕ್ಕಳ ತಾಳಿ ತೆಗೆಸಲಾಗಿದೆಯಲ್ಲ ಎಂಬ ಪ್ರಶ್ನೆಗೆ ಮೌನವಾದರು.