ಬೀದರ್ : ಲಂಚ ಸ್ವೀಕರಿಸುತ್ತಿದ್ದಾಗ ಬಸವಕಲ್ಯಾಣ ತಾಲೂಕಿನ ಮಂಠಾಳದ ಪಿಎಸ್ಐ ಹಾಗೂ ಕಾನ್ಸ್ಟೆಬಲ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಪಿಎಸ್ಐ ಶೀಲಾ ನ್ಯಾಮನ್ ಮತ್ತು ಕಾನ್ಸ್ಟೆಬಲ್ ಪರಶುರಾಮ ರೆಡ್ಡಿ ಬಂಧಿತರು.
ಇವರು ಮರಳು ಸಾಗಾಣಿಕೆ ಮಾಡಲು ಪ್ರತಿ ತಿಂಗಳು ಒಂದು ಲಾರಿಗೆ 7 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಒಟ್ಟು ಮೂರು ಲಾರಿಗಳಿಗೆ 21 ಸಾವಿರ ರೂ. ಬೇಡಿಕೆ ಇಟ್ಟಿದ್ದು ಕಲಬುರಗಿ ನಗರದ ಇರ್ಷಾದ್ ಪಟೇಲ್ ಎನ್ನುವವರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಠಾಳ ಠಾಣೆಯ ಮೇಲೆ ಬುಧವಾರ ಸಂಜೆ ದಾಳಿ ನಡೆಸಲಾಗಿತ್ತು. ಲೋಕಾಯುಕ್ತ ಎಸ್ಪಿ ಎ.ಆರ್.ಕರ್ನೂಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್.ಎಂ.ಓಲೇಕಾರ್, ತನಿಖಾಧಿಕಾರಿಗಳಾದ ಬಾಬಾ ಸಾಹೇಬ್ ಪಾಟೀಲ್, ಪ್ರದೀಪ ಕೊಳ್ಳಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.
ದೂರಿನ ವಿವರ: ಕಲಬುರಗಿ ಅಹ್ಮದ್ ನಗರದ ಇರ್ಷಾದ್ ಪಟೇಲ್ ಬುಧವಾರ ಬೀದರ್ ಲೋಕಾಯುಕ್ತ ಪೊಲೀಸ್ ಠಾಣೆಗೆ ಲಂಚದ ಬಗ್ಗೆ ದೂರು ನೀಡಿದ್ದರು. ಕಾನೂನು ಬದ್ಧವಾಗಿ ಪರವಾನಗಿ ಪಡೆದು ಮರಳು ಸಾಗಾಣಿಕೆ ವ್ಯಾಪಾರ ಮಾಡಿಕೊಂಡಿದ್ದೇನೆ. ಆದರೆ ಮರಳು ಸಾಗಾಣಿಕೆ ಮಾಡಲು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಪ್ರತಿ ಲಾರಿಗೆ ರೂಪಾಯಿ 7,000 ಯಂತೆ ಮೂರು ಲಾರಿಗೆ ಒಟ್ಟು 21,000 ರೂ. ಲಂಚದ ಹಣ ನೀಡಬೇಕೆಂದು ಪಿಎಸ್ಐ ಶೀಲಾ ನ್ಯಾಮನ್, ಹಾಗು ಕಾನ್ಸ್ಟೆಬಲ್ ಪರಶುರಾಮರೆಡ್ಡಿ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ.