ಬೀದರ್: ಇದು ಡಬ್ಬಾ ಬಜೆಟ್. ಏನು ಮಹತ್ವದ ಯೋಜನೆಗಳಿಲ್ಲ. ರಾಜ್ಯದ ಜನತೆಯ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದೆ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಮಧ್ನಾಹ್ನ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇದು ನಿರಾಶದಾಯಕ ಬಜೆಟ್ ಆಗಿದೆ. ಈ ಬಜೆಟ್ ನಲ್ಲಿ ರೈತರಿಗೆ ಸಂಬಂಧಿಸಿದ ಒಂದೇ ಒಂದು ನಿದಿಷ್ಟ ಯೋಜನೆಗಳನ್ನು ಜಾರಿಗೆ ತಂದಿಲ್ಲ. ರೈತರ ಆದಾಯ ಡಬಲ್ ಮಾಡ್ತಿವಿ ಅಂತ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಹೇಳಲಾಗಿತ್ತು. ಆದರೇ ಈ ಬಜೆಟ್ ನಲ್ಲಿ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಬಡವರ ಪರವಾಗಿ ಏನ್ ಮಾಡಿದ್ದಾರೆ. ಬಡವರಿಗೆ ಐದು ನೂರು ರೂ. ಕೊಡ್ತಿನಿ ಅಂತ ಹೇಳಿದ್ದಾರೆ. ಐದು ನೂರರ ಬದಲಿಗೆ 2000 ಕೊಡಬೇಕಿತ್ತು. ಐದು ನೂರು ರೂಪಾಯಿನಲ್ಲಿ ಬಡವರು ಜೀವನ ನಡೆಸಬಹುದಾ. ನೀರಾವರಿ ಯೋಜನೆಗಳಲ್ಲಿ ವಿಶೇಷತೆ ಏನು ಇಲ್ಲ. ಕಳೆದ ವರ್ಷ ನೀಡಿದ ಅನುದಾನವನ್ನೇ ಮತ್ತೇ ನೀಡಲಾಗಿದೆ. ಕಳೆದ ವರ್ಷದ ನೀರಾವರಿ ಯೋಜನೆಗೂ ಕೂಡ ಚಾಲನೆ ನೀಡಿಲ್ಲ. ರಾಜ್ಯದ ಜನತೆಗೆ ಯಾವುದೇ ನಿರ್ದಿಷ್ಟ ಯೋಜನೆ ನೀಡಿಲ್ಲ.
ಈ ಬಜೆಟ್ ನಲ್ಲಿ ಹುರುಳಿಲ್ಲ. ಮುಂದೆ ಅಧಿಕಾರಕ್ಕೆ ಬರುವ ಸರ್ಕಾರ ಮತ್ತೊಂದು ಹೊಸ ಬಜೆಟ್ ಮಂಡಿಸುತ್ತದೆ. ರೈತರಿಗೆ, ಬಡವರಿಗೆ ಒಳ್ಳೆಯ ಯೋಜನೆಗಳನ್ನು ನೀಡ್ತಿವಿ ಅಂತ ಇವರು ಪುಸ್ತಕದಲ್ಲೂ ಹೇಳಿಲ್ಲ. ನಮ್ಮ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಯಲ್ಲಿ ಘೋಷಣೆ ಮಾಡಿರುವ ಯೋಜನೆಗಳಿಗೆ ಪೂರಕವಾಗಿ ಬಿಜೆಪಿಯವರು ಬಜೆಟ್ ಘೋಷಣೆ ಮಾಡ್ತಾರೆ ಅಂದುಕೊಂಡಿದ್ದೆವು. ಆದರೆ ಆ ನಿರೀಕ್ಷೆ ಹುಸಿಯಾಗಿದೆ ಎಂದರು.
ಒಟ್ಟಾರೆಯಾಗಿ ಈ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಅಷ್ಟೆ ಅಲ್ಲದೇ ಸಂಪೂರ್ಣವಾಗಿ ನಿರಾಶದಾಯಕವಾಗಿದೆ. ಇದು ಟೋಟಲ್ ಡಬ್ಬಾ ಬಜೆಟ್ ಆಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಬೇಸರ ವ್ಯಕ್ತಪಡಿಸಿದರು.