ಬೀದರ್: ಮುಂಬೈ-ಸೊಲ್ಲಾಪುರ ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಕಲಬುರಗಿವರೆಗೆ ವಿಸ್ತರಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಲಾಗಿದ್ದು, ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಸಂಸದ ಡಾ.ಉಮೇಶ ಜಾಧವ್ ತಿಳಿಸಿದರು.
ಕಲಬುರಗಿ-ಬೀದರ್ ಮಧ್ಯೆ ನಿತ್ಯ ಸಂಚರಿಸಲಿರುವ ಡೆಮು ರೈಲಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಬಹುದಿನಗಳ ಬೇಡಿಕೆಯಾಗಿದ್ದ ಚೆನ್ನೈ-ಅಹಮದಾಬಾದ್ ಏಕತಾ ನಗರ ಎಕ್ಸ್ಪ್ರೆಸ್ ರೈಲು ಕಲಬುರಗಿ ನಿಲ್ದಾಣದಲ್ಲಿ ನಿಲ್ಲಲಿದೆ. ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಸಿಕಂದರಾಬಾದ್ಗೆ ತೆರಳುವ ದುರೊಂತೊ ಎಕ್ಸ್ಪ್ರೆಸ್ ರೈಲು ವಾಡಿಯಲ್ಲಿ ನಿಲ್ಲಲಿದೆ. ಮುಂಬೈ-ತಿರುವನಂತಪುರಂ ಎಕ್ಸ್ಪ್ರೆಸ್ ರೈಲು ಶಹಬಾದ್ನಲ್ಲಿ ನಿಲ್ಲಲಿದೆ. ಮುಂಬೈ ಸಿಎಸ್ಎಂಟಿ-ನಾಗರ್ಕೊಯಿಲ್ ಎಕ್ಸ್ಪ್ರೆಸ್ ಶಹಬಾದ್ನಲ್ಲಿ ನಿಲ್ಲಲಿದೆ. ಚೆನ್ನೈ-ಅಹ್ಮದಾಬಾದ್ ಎಕ್ಸ್ಪ್ರೆಸ್ ಕಲಬುರಗಿಯಲ್ಲಿ, ಮುಂಬೈ-ಹೈದರಾಬಾದ್ ಎಕ್ಸ್ಪ್ರೆಸ್ ಸೇಡಂನಲ್ಲಿ ನಿಲ್ಲಲಿವೆ. ನಾಲವಾರ ನಿಲ್ದಾಣದಲ್ಲಿ ನಿಲ್ಲಲಿವೆ. ಮುಂದಿನ ದಿನಗಳಲ್ಲಿ ಕಲಬುರಗಿ ರೈಲು ನಿಲ್ದಾಣವನ್ನು ಆಧುನಿಕರಿಸಲಾಗುವುದು’ ಎಂದು ಭರವಸೆ ನೀಡಿದರು.
‘ನಿತ್ಯ ಕಲಬುರಗಿ-ಬೀದರ್ ನಗರಗಳಿಗೆ ಸಾವಿರಾರು ಜನರು ಸಂಚರಿಸುತ್ತಾರೆ. ಅಲ್ಲದೇ, ಹಲವು ಗ್ರಾಮಗಳ ಜನರು ಅತಿ ಕಡಿಮೆ ವೆಚ್ಚದಲ್ಲಿ ಈ ರೈಲು ಸೌಲಭ್ಯವನ್ನು ಬಳಕೆ ಮಾಡಬಹುದಾಗಿದೆ. ಆದ್ದರಿಂದ ಮತ್ತೊಂದು ಡೆಮು ರೈಲು ಆರಂಭಿಸುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದೆವು. ಅದಕ್ಕೆ ಸ್ಪಂದಿಸಿ ಇದೀಗ ಡೆಮು ರೈಲು ಆರಂಭಿಸಿದ್ದಾರೆ’ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಬೀದರ್-ಬೆಂಗಳೂರು ಮಧ್ಯೆ ಹೊಸ ಎಕ್ಸ್ಪ್ರೆಸ್ ರೈಲನ್ನು ಆರಂಭಿಸಬೇಕು. ಇದರಿಂದ ಈ ಭಾಗದ ಜನರ ಓಡಾಟಕ್ಕೆ ಅನುಕೂಲವಾಗಲಿದೆ. ಅಲ್ಲದೇ, ಆ ರೈಲನ್ನು ತಾಜ ಸುಲ್ತಾನಪುರದಲ್ಲಿ ನಿಲ್ಲಿಸಿದರೆ ಆ ಭಾಗದ ಜನರು ಅದೇ ನಿಲ್ದಾಣಕ್ಕೆ ಹೋಗಲು ಸಹಕಾರಿಯಾಗಲಿದೆ’ ಎಂದು ಸೊಲ್ಲಾಪುರ ವಿಭಾಗದ ರೈಲ್ವೆ ವ್ಯವಸ್ಥಾಪಕ ನೀರಜ್ಕುಮಾರ್ ದೊಹರೆ ಅವರಿಗೆ ಮನವಿ ಮಾಡಿದರು.
ಕಲಬುರಗಿ-ಬೀದರ್ ಡೆಮು ರೈಲಿಗೆ ಶನಿವಾರ ಇದೇ ರೈಲಿಗೆ ಕೇಂದ್ರ ಸಚಿವ ಭಗವಂತ ಖೂಬಾ ಬೀದರ್ನಲ್ಲಿ ಚಾಲನೆ ನೀಡಿದ್ದರು. ಇದೀಗ ಒಂದೇ ರೈಲಿಗೆ ಎರಡನೇ ಬಾರಿ ಚಾಲನೆ ನೀಡಿದಂತಾಗಿದೆ.