ಬೀದರ್: ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಯಾರೂ ಹತ್ತಿರದವರು ಅಥವಾ ದೂರದವರು ಇರಲಿಲ್ಲ. ಅವರು ಸರ್ವರನ್ನೂ ಪ್ರೀತಿಸಿದ್ದರು ಎಂದು ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ನುಡಿದರು.
ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಸಿದ್ಧೇಶ್ವರ ಶ್ರೀ ನುಡಿನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಿದ್ಧೇಶ್ವರ ಸ್ವಾಮೀಜಿ ಜ್ಞಾನ ತುಂಬಿದ ಕೊಡ ಆಗಿದ್ದರು. ಅವರ ನಡೆ- ನುಡಿ ಒಂದೇ ಆಗಿತ್ತು. ಪರಮಾತ್ಮ ಜಗದ ಉದ್ಧಾರಕ್ಕೆ ಅವರನ್ನು ಧರೆಗೆ ಕಳುಹಿಸಿದ್ದ ಎಂದು ಹೇಳಿದರು.
ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಿದ್ಧೇಶ್ವರ ಶ್ರೀ ವಚನ ಹಾಗೂ ಉಪನಿಷತ್ತು ಎರಡನ್ನೂ ಅಳವಡಿಸಿಕೊಂಡ ಬದುಕಿದ ಮಹಾನ್ ಸಂತ. ಅವರು ಪ್ರತಿಯೊಬ್ಬರಲ್ಲೂ ಒಳ್ಳೆಯದ್ದನ್ನೇ ಕಂಡಿದ್ದರು. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು.
ಈ ಮೂಲಕ ನಕಾರಾತ್ಮಕ ವಿಚಾರಗಳಿಗೆ ವಿದಾಯ ಹೇಳಬೇಕು ಎಂದರು.
ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಪ್ರತಿಮಾ ಬಹೆನ್ಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ, ಕೌಠಾದ ಬಸವ ಯೋಗಾಶ್ರಮದ ಸಿದ್ಧರಾಮ ಶರಣರು ಬೆಲ್ದಾಳ, ಬರ್ದಿಪುರ ಆಶ್ರಮದ ಸಿದ್ದೇಶ್ವರ ಮಹಾರಾಜ, ಲಿಂಗಾಯತ ಮಹಾ ಮಠದ ಅಕ್ಕ ಅನ್ನಪೂರ್ಣತಾಯಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾತಂಬ್ರಾದ ಶಿವಯೋಗೀಶ್ವರ ಸ್ವಾಮೀಜಿ, ತಡೋಳಾದ ರಾಜೇಶ್ವರ ಶಿವಾಚಾರ್ಯ, ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಂಬಿಕೆ ಅಕ್ಕ, ಸದಲಗಾದ ಶ್ರದ್ಧಾನಂದ ಸ್ವಾಮೀಜಿ, ಬಾಲಗಾಂವ್ನ ಅಮೃತಾನಂದ ಸ್ವಾಮೀಜಿ, ಹುಲ್ಯಾಳದ ಹರ್ಷಾನಂದ ಸ್ವಾಮೀಜಿ, ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯ ಬಿ.ಜಿ ಶೆಟಕಾರ್ ಮಾತನಾಡಿದರು.
ಸಿದ್ಧರಾಮೇಶ್ವರ ಸ್ವಾಮೀಜಿ, ಮನ್ನಾಎಖ್ಖೆಳ್ಳಿಯ ಮಾತೆ ಮೈತ್ರಾದೇವಿ ಉಪಸ್ಥಿತರಿದ್ದರು. ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯ ಬಸವರಾಜ ಧನ್ನೂರು ಸ್ವಾಗತಿಸಿದರು. ಸುರೇಶ ಸ್ವಾಮಿ ನಿರೂಪಿಸಿದರು. ಬಸವಕುಮಾರ ಪಾಟೀಲ ವಂದಿಸಿದರು.