ಬೀದರ್, ಜ.24: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಾವಗಿ ಗ್ರಾಮದ ಅನೇಕ ಜನ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು, ಪಿಕೆಪಿಎಸ್ ಸದಸ್ಯರು ಬಿಜೆಪಿ ಪಕ್ಷ ತೊರೆದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಸೋಮವಾರ ರಾತ್ರಿ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಬಿಜೆಪಿ ಪಕ್ಷದ ನೂರಾರು ಜನ ಪ್ರಮುಖರನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಚುನಾವಣೆ ಸಮೀಪಿಸುತ್ತಿದ್ದು ನಾವೆಲ್ಲರೂ ಸೇರಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ. ಜೆಡಿಎಸ್ ಪಕ್ಷದಿಂದ ಜನತಾ ಜಲದಾರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಪ್ರಸ್ತುತ ಪಂಚರತ್ನ ರಥಯಾತ್ರೆ ನಡೆಯುತ್ತಿದೆ. ನಮ್ಮ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು.
ಪಕ್ಷದ ರಾಷ್ಟ್ರಾಧ್ಯಕ್ಷರಾದ ಹೆಚ್.ಡಿ ದೇವೇಗೌಡರ ಮಾರ್ಗದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು, ಪಕ್ಷದ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂರವರು ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ನಾವೆಲ್ಲರೂ ಸೇರಿ ಕುಮಾರಸ್ವಾಮಿರವರ ಕೈ ಬಲಪಡಿಸಬೇಕಾಗಿದೆ. ಗ್ರಾಮೀಣ ಭಾಗದಿಂದ ಬೂತ್ ಮಟ್ಟದಿಂದ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡೋಣವೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ನೂತನ ಮುಖಂಡರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಚನ್ನಮ್ಮಲ್ಲಪ್ಪ ಹಜ್ಜರಗಿ, ಗಣಪತಿ ಶಂಭು, ಮಹೇಶ್ ಚಿಂತಾಮಣಿ, ನೂತನವಾಗಿ ಸೇರ್ಪಡೆಯಾದ ಬಿಜೆಪಿಯ ಬೀದರ್ ದಕ್ಷಿಣ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಇಬ್ರಾಹಿಂ ಸಿರ್ಸಿವಾಲೆ, ಗ್ರಾಮ ಪಂಚಾಯತಿ ಸದಸ್ಯರಾದ ಶಾಂತವೀರ ಹಜ್ಜರಗಿ, ಮಾರುತಿ ವಾಡಿ, ಶಿವಕುಮಾರ್ ಸೋನಿ, ಪಿಕೆಪಿಎಸ್ ಸದಸ್ಯರಾದ ರಾಜಕುಮಾರ ಬದ್ರಾಣ, ಭೀಮಣ್ಣ ಹೊನ್ನಿಕೆರಿ, ಯೂಸುಬ್ ಮಿಯಾ, ಅನಿಲ್ ಕುಮಾರ್ ಮುದ್ದಾ, ಭೀರಪ್ಪ ವಾಡಿ, ವೀರಶೆಟ್ಟಿ ಭಾಲ್ಕಿ, ಕಾಶಪ್ಪ ಪರಿಟ್, ಪವನ್ ಬೋರಶೆಟ್ಟಿ, ಸತೀಶ್ ಪಾಟೀಲ್ ಈಡಗಾರ್, ವೀರಶೆಟ್ಟಿ ಬಾಪೂರ, ಮಡೆಪ್ಪ ಹಜ್ಜರಗಿ, ಶಿವಕುಮಾರ್ ಗೋತಾಳಿ, ನಾಗಪ್ಪ ಕಿರಾಳ, ಶರಣಪ್ಪ ಕೋಲಿ, ರಾಜಕುಮಾರ ಬಾಪೂರ, ವೀರಶೆಟ್ಟಿ ಸಂಗಶೆಟ್ಟಿ, ಬಸವರಾಜ್ ದೊಡ್ತಮ್, ವೀರಶೆಟ್ಟಿ ಕೌದಿ, ಅಮರೇಶ್ ಕೋರಿ, ಶಿವು ಹಜ್ಜರಗಿ, ಭದ್ರಪ್ಪ ಹಜ್ಜರಗಿ, ಬೋರೂಮೀಯಾ, ಸಾಯಿನಾಥ ಹಜ್ಜರಗಿ, ಜಗನ್ನಾಥ ಸಿರ್ಸಿ, ನಾಗೇಶ ಕೋಳಾರ ಸೇರಿದಂತೆ ಅನೇಕರಿದ್ದರು.