ಔರಾದ: ಶಿಕ್ಷಕರ ಕೊರತೆ ನೀಗಿಸುವಂತೆ ವಿದ್ಯಾರ್ಥಿಗಳು ತರಗತಿ ತೊರೆದು ಗ್ರಾಮ ಪಂಚಾಯತ್ ಕಛೇರಿ ಮುಂಭಾಗ ಕುಳಿತು ಪ್ರತಿಭಟಿಸಿದ ಘಟನೆ ಔರಾದ ತಾಲೂಕಿನಲ್ಲಿ ಜರುಗಿದೆ.
ತಾಲೂಕಿನ ಗಡಿ ಗ್ರಾಮ ಜಮಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ 15 ದಿನಗಳಿಂದ ನಾಲ್ಕು ವಿಷಯಗಳ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ದಿನ ದೂಡುತ್ತಿದ್ದಾರೆ. ಶಾಲೆಯ ನಾಲ್ಕು ಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಆದರೂ ಬೇರೆ ಶಿಕ್ಷಕರು ಇನ್ನೂ ಬಂದಿಲ್ಲ. ಶಿಕ್ಷಕರಿಲ್ಲದೇ ಬೇಸತ್ತು ವಿದ್ಯಾರ್ಥಿಗಳು ಪಂಚಾಯತ್ ಕಛೇರಿ ಮುಂದೆ ಕೆಲಕಾಲ ಧರಣಿ ನಡೆಸಿ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿದರು.
ಜಮಗಿ ಪ್ರೌಢ ಶಾಲೆಯಲ್ಲಿ ಸುಮಾರು 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದೇವೆ. ಆದರೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಸೇರಿ ಗಣಿತ ವಿಷಯ ಶಿಕ್ಷಕರೊಬ್ಬರೇ ಇದ್ದಾರೆ. ಉಳಿದ ಯಾವುದೇ ವಿಷಯಗಳ ಶಿಕ್ಷಕರಿಲ್ಲ. ಕಳೆದ ಹದಿನೈದು ದಿನಗಳಿಂದ ಬೇರೆ ಶಿಕ್ಷಕರು ಬರ್ತಾರೆ ಅಂತ ಹೇಳ್ತಾನೇ ಇದ್ದಾರೆ. ಇದರಿಂದ ನಾವು ಶೈಕ್ಷಣಿಕ ಹಿನ್ನಡೆ ಅನುಭವಿಸುವಂತಾಗಿದೆ. ಸ್ಥಳೀಯ ಶಾಲಾ ಜವಾಬ್ದಾರಿ ನಿರ್ವಹಿಸುವ ಗ್ರಾಮ ಪಂಚಾಯತ್ ಆಡಳಿತ ಕೂಡಲೇ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.