ಬಸವಕಲ್ಯಾಣ: ಬಸವಕಲ್ಯಾಣ ಕ್ಷೇತ್ರದಲ್ಲಿ 2018ರ ಸಾರ್ವತ್ರಿಕ ಚುನಾವಣೆ ಬಳಿಕ ಇಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನಿಂದ ಆಯ್ಕೆ ಆಗಿದ್ದ ಬಿ.ನಾರಾಯಣರಾವ್ ನಿಧನರಾದ ಕಾರಣ ಐದು ವರ್ಷದ ಅವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ ನಡೆದ ಉಪ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿಯ ಶರಣು ಸಲಗರ ಇನ್ನರ್ಧ ಅವಧಿಗೆ ಶಾಸಕರಾದರು. ಈಗ ಮತ್ತೆ ಚುನಾವಣೆ ನಡೆಯುತ್ತಿದೆ.
ಮೊದಲು ಇದು ಹುಮನಾಬಾದ್ ಕ್ಷೇತ್ರವಾಗಿತ್ತು. 1957ರಲ್ಲಿ ಪ್ರತ್ಯೇಕ ಕ್ಷೇತ್ರವಾದ ಬಳಿಕ ಒಂದು ಉಪ ಚುನಾವಣೆ ಒಳಗೊಂಡು 15 ಚುನಾವಣೆ ನಡೆದಿವೆ. 16ನೇ ಚುನಾವಣೆಗೆ ಕ್ಷೇತ್ರ ಸಿದ್ಧಗೊಂಡಿದೆ. ಹೊಸ ತಾಲ್ಲೂಕು ಸ್ಥಳವಾದ ಹುಲಸೂರ 2008ರ ವರೆಗೆ ಮೀಸಲು ವಿಧಾನಸಭಾ ಕ್ಷೇತ್ರವಾಗಿತ್ತು. ಆ ಭಾಗ ಈ ಕ್ಷೇತ್ರಕ್ಕೆ ಒಳಪಟ್ಟ ನಂತರ ನಾಲ್ಕನೇ ಚುನಾವಣೆ ನಡೆಯುತ್ತಿದೆ. 2.41 ಲಕ್ಷ ಮತದಾರರು ಮತದಾನದ ಹಕ್ಕು ಚಲಾಯಿಸುವರು.
ಬಿ.ನಾರಾಯಣರಾವ್ ಅವರ ಅರ್ಧ ಅವಧಿ ಒಳಗೊಂಡು ಕಾಂಗ್ರೆಸ್ 5 ಸಲ ಗೆದ್ದಿದೆ. ಜನತಾ ಪರಿವಾರದ ಅಭ್ಯರ್ಥಿ 7 ಬಾರಿ, ಪಕ್ಷೇತರ ಅಭ್ಯರ್ಥಿ ಒಮ್ಮೆ ಆಯ್ಕೆಯಾಗಿದ್ದಾರೆ. ಶರಣು ಸಲಗರ ಅವರ ಅರ್ಧ ಅವಧಿ ಒಳಗೊಂಡು ಎರಡು ಸಲ ಬಿಜೆಪಿ ಇಲ್ಲಿ ಗೆದ್ದಿದೆ. ಲಿಂಗಾಯತ ಮತ್ತು ಮರಾಠಾ ಸಮುದಾಯದವರೇ ಶಾಸಕರಾಗುತ್ತಿದ್ದ ಇಲ್ಲಿ 2018ರಲ್ಲಿ ಹಿಂದುಳಿದ ವರ್ಗ ಕೋಲಿ ಸಮಾಜದ ಬಿ.ನಾರಾಯಣರಾವ್ ಆಯ್ಕೆಗೊಂಡರು. ಬಹುಸಂಖ್ಯೆಯಲ್ಲಿರುವ ಮುಸ್ಲಿಂ ಸಮು ದಾಯದವರು ಗೆದ್ದಿಲ್ಲ. ಆದರೂ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದ ತಾಜೊದ್ದೀನ್ ನವಾಜಭಾಯಿ, ಕಮಾಲುದ್ದೀನ್ ನವಾಬ್ 2ನೇ ಹಾಗೂ ಉಪ ಚುನಾ ವಣೆಯ ಜೆಡಿಎಸ್ ಅಭ್ಯರ್ಥಿ ಯಶ್ರಬಅಲಿ ಖಾದ್ರಿ 3ನೇ ಸ್ಥಾನ ಪಡೆದರು.
1957 ರ ಪ್ರಥಮ ಹಾಗೂ ನಂತರದ ಎರಡನೇ ಚುನಾವಣೆಯಲ್ಲಿ ಅನ್ನಪೂರ್ಣಾಬಾಯಿ ರಗಟೆ ಗೆದ್ದರು. ಅಪಘಾತದಲ್ಲಿ ಗಾಯಗೊಂಡ ಕಾರಣ ರಾಜಕೀಯದಿಂದ ದೂರವಿರುವ ಬಸವರಾಜ ಪಾಟೀಲ ಅಟ್ಟೂರ್ 5 ಸಲ, ಬಾಪುರಾವ್ ಪಾಟೀಲ ಹುಲಸೂರಕರ್ 2 ಸಲ ಮತ್ತು ಮಲ್ಲಿಕಾರ್ಜುನ ಖೂಬಾ 2 ಸಲ ಶಾಸಕರಾದರು. ಅಟ್ಟೂರ್ ಮತ್ತು ಹುಲಸೂರಕರ್ ಅವರಿಗೆ ಮಾತ್ರ ಸಚಿವ ಸ್ಥಾನ ಒಲಿದಿತ್ತು. ಸಿದ್ರಾಮಪ್ಪ ಖೂಬಾ ಮತ್ತು ಮಲ್ಲಿಕಾರ್ಜುನ ಖೂಬಾ ಈ ತಂದೆ- ಮಗನಿಗೂ ಸ್ಥಾನ ದೊರೆತಿತ್ತು.
ಸಮಾನತೆಯ ಹರಿಕಾರ ಬಸವಣ್ಣನವರ ಈ ಕ್ಷೇತ್ರದಲ್ಲಿ ₹ 620 ಕೋಟಿ ವೆಚ್ಚದ ಅನುಭವ ಮಂಟಪದ ಕಾಮಗಾರಿ ಭರದಿಂದ ಸಾಗಿದೆ. ಶರಣರ ಈ ಸ್ಥಳವನ್ನು ಜಿಲ್ಲಾ ಕೇಂದ್ರವಾಗಿಸಲು ಸತತ ಪ್ರಯತ್ನ ನಡೆದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆಯುವ ಈ ಕ್ಷೇತ್ರದಿಂದ ಪ್ರಸಕ್ತ ಚುನಾವಣೆಯಲ್ಲಿ ಆಯ್ಕೆ ಆಗುವುದಕ್ಕಾಗಿ ಹಲವರು ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಆಯ್ಕೆ ವರ್ಷ; ಆಯ್ಕೆಗೊಂಡವರು; ಎದುರಾಳಿ ಅಭ್ಯರ್ಥಿ
1957;ಅನ್ನಪೂರ್ಣಾಬಾಯಿ ರಗಟೆ (ಕಾಂಗ್ರೆಸ್);ಝಂಪಾಬಾಯಿ(ಪಕ್ಷೇತರ)
1962;ಅನ್ನಪೂರ್ಣಾಬಾಯಿ ರಗಟೆ (ಕಾಂಗ್ರೆಸ್);ಕೃಷ್ಣಾಜಿ ಶಾಸ್ತ್ರೀ (ಪಕ್ಷೇತರ)
1967;ಸಿದ್ರಾಮಪ್ಪ ಎಸ್.ಖೂಬಾ (ಪಕ್ಷೇತರ);ಬಾಪುರಾವ್ ಪಾಟೀಲ ಹುಲಸೂರಕರ್ (ಪಕ್ಷೇತರ)
1972;ಬಾಪುರಾವ್ ಪಾಟೀಲ ಹುಲಸೂರಕರ್ (ಕಾಂಗ್ರೆಸ್);ಸಿದ್ರಾಮಪ್ಪ ಎಸ್.ಖೂಬಾ (ಪಕ್ಷೇತರ)
1978;ಬಾಪುರಾವ್ ಪಾಟೀಲ ಹುಲಸೂರಕರ್ (ಸಂಸ್ಥಾ ಕಾಂಗ್ರೆಸ್);ತಾಜೊದ್ದೀನ್ ನವಾಜಭಾಯಿ (ಜನತಾ ಪಕ್ಷ)
1983;ಬಸವರಾಜ ಪಾಟೀಲ ಅಟ್ಟೂರ್ (ಜನತಾ ಪಕ್ಷ);ಕಮಾಲುದ್ದೀನ್ ನವಾಬ್ (ಪಕ್ಷೇತರ)
1987;ಬಸವರಾಜ ಪಾಟೀಲ ಅಟ್ಟೂರ್ (ಜನತಾ ಪಕ್ಷ);ಎಂ.ಜಿ.ಮುಳೆ (ಕಾಂಗ್ರೆಸ್)
1989;ಬಸವರಾಜ ಪಾಟೀಲ ಅಟ್ಟೂರ್ (ಜನತಾ ದಳ);ಎಂ.ಜಿ.ಮುಳೆ (ಕಾಂಗ್ರೆಸ್)
1994;ಬಸವರಾಜ ಪಾಟೀಲ ಅಟ್ಟೂರ್ (ಜನತಾ ದಳ);ಎಂ.ಜಿ.ಮುಳೆ (ಕಾಂಗ್ರೆಸ್)
1999;ಎಂ.ಜಿ.ಮುಳೆ (ಜೆಡಿಎಸ್);ಬಸವರಾಜ ಪಾಟೀಲ ಅಟ್ಟೂರ್ (ಜೆಡಿಯು)
2004;ಮಲ್ಲಿಕಾರ್ಜುನ ಖೂಬಾ (ಜೆಡಿಎಸ್);ಬಸವರಾಜ ಪಾಟೀಲ ಅಟ್ಟೂರ್ (ಪಕ್ಷೇತರ)
2008;ಬಸವರಾಜ ಪಾಟೀಲ ಅಟ್ಟೂರ್ (ಬಿಜೆಪಿ);ಎಂ.ಜಿ.ಮುಳೆ (ಕಾಂಗ್ರೆಸ್)
2013;ಮಲ್ಲಿಕಾರ್ಜುನ ಖೂಬಾ (ಜೆಡಿಎಸ್);ಬಿ.ನಾರಾಯಣರಾವ್ (ಕಾಂಗ್ರೆಸ್)
2018;ಬಿ.ನಾರಾಯಣರಾವ್ (ಕಾಂಗ್ರೆಸ್);ಮಲ್ಲಿಕಾರ್ಜುನ ಖೂಬಾ (ಬಿಜೆಪಿ)
2021;ಶರಣು ಸಲಗರ (ಬಿಜೆಪಿ);ಮಾಲಾ ನಾರಾಯಣರಾವ್ (ಕಾಂಗ್ರೆಸ್)(ಉಪ ಚುನಾವಣೆ)