ಹುಮನಾಬಾದ್: ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದ ಪ್ರಸನ್ನ ಪ್ರೀ ಪ್ರೋಸೆಸಿಂಗ್ ಲಿಮಿಟೆಡ್ ಕಂಪನಿ ಕಾರ್ಖಾನೆಗೆ ಮಂಗಳವಾರ ಅಧಿಕಾರಿಗಳ ತಂಡ ಸೀಲ್ ಹಾಕಿ ಬಂದ್ ಮಾಡಿತು.
ಈಚೆಗೆ ಈ ಕಂಪನಿಯಲ್ಲಿ ವಿಷ ಅನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಒಂದು ವಾರದಲ್ಲಿ ಕಾರ್ಖಾನೆಯಲ್ಲಿನ ತ್ಯಾಜ್ಯ ತೆರವುಗೊಳಿಸಿ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಆದೇಶ ಹೊರಡಿಸಿದ್ದರು.
ಹೀಗಾಗಿ ತಹಶೀಲ್ದಾರ್ ಅಂಜುಂ ತಬಸುಮ್ ಅವರು ಮಂಗಳವಾರ ಬೆಳಿಗ್ಗೆ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಿಸಿ, ಕಾರ್ಖಾನೆಗೆ ಬೀಗ ಹಾಕಿಸಿದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಸುರೇಶ್, ಜೆಸ್ಕಾಂ ಸಿಬ್ಬಂದಿ ಹಾಗೂ ಪಿಡಿಒ ಇದ್ದರು.