ಹುಮನಾಬಾದ್: ಜಿಲ್ಲೆಯ ಹುಮನಾಬಾದ್ ಸಮೀಪದ ಗಡವಂತಿ ಕೈಗಾರಿಕಾ ಪ್ರದೇಶದಲ್ಲಿ ಈಚೆಗೆ ವಿಷಾನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದ ಪ್ರಸನ್ನ ಪ್ರೀ ಪ್ರೊಸೆಸಿಂಗ್ ಲಿಮಿಟೆಡ್ ಕಾರ್ಖಾನೆಯನ್ನು ಬಂದ್ ಮಾಡುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ.
ನಿಯಮಗಳನ್ನು ಪಾಲಿಸದ ಕಾರಣ ಪ್ರಸನ್ನ ಪ್ರೀ ಪ್ರೊಸೆಸಿಂಗ್ ಲಿಮಿಟೆಡ್ ಕಾರ್ಖಾನೆ ಬಂದ್ ಮಾಡಿ ಜನವರಿ 25ರಂದು ಆದೇಶ ಹೊರಡಿಸಲಾಗಿದೆ. ವಾರದೊಳಗೆ ಕಾರ್ಖಾನೆಯ ತ್ಯಾಜ್ಯ ವಿಲೇವಾರಿ ಮಾಡಬೇಕು. ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು. ತಕ್ಷಣವೇ ಕಾರ್ಖಾನೆ ಬಂದ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ಕೊಡಲಾಗಿದೆ’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಜನವರಿ 21ರ ರಾತ್ರಿ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಹುಮನಾಬಾದ್ ತಾಲ್ಲೂಕಿನ ವಡ್ಡನಕೇರಾ ಗ್ರಾಮದ ಮೊಹಮ್ಮದ್ ಶಾಬಾದ್ (21) ಹಾಗೂ ಮಧ್ಯಪ್ರದೇಶದ ಇಂದ್ರಜೀತ್ (23) ಎಂಬ ಕಾರ್ಮಿಕರು ಮೃತಪಟ್ಟಿದ್ದರು. ಬಳಿಕ ತನಿಖೆಗೆ ಆದೇಶಿಸಲಾಗಿತ್ತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸದಿರುವುದು ತನಿಖೆಯಿಂದ ಗೊತ್ತಾಗಿದ್ದರಿಂದ ಬಂದ್ ಮಾಡಲು ಆದೇಶಿಸಿದೆ. ಪ್ರಸನ್ನ ಪ್ರೊಸೆಸಿಂಗ್ ಕಾರ್ಖಾನೆಯಲ್ಲಿ ಕೈಗಾರಿಕೆಗಳ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿತ್ತು.