ಹುಲಸೂರ: ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ನೆಲ, ಜಲ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗಾಗಿ ಅನುಕೂಲ ಕಲ್ಪಿಸಲು ಕನ್ನಡ ಭವನ ನಿರ್ಮಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಮನವಿ ಮಾಡಿದೆ.
ಪಟ್ಟಣದಲ್ಲಿ ಈ ಕುರಿತು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹಾವಣ್ಣ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವಕುಮಾರ ಭೂಸಾರೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂದೀಪ ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
‘ಕನ್ನಡ ಭವನಕ್ಕಾಗಿ ಒಂದು ನಿವೇಶನ ಮಂಜೂರು ಮಾಡಿ, ಕನ್ನಡ ಭಾಷೆಯ ಬೆಳವಣಿಗೆ ಜೊತೆಗೆ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯಕ್ಕೆ ಸಹಕರಿಸಬೇಕು’ ಎಂದು ನಾಗರಾಜ ಹಾವಣ್ಣ ಕೋರಿದರು.
ಮನವಿ ಸ್ವೀಕರಿಸಿದ ಗ್ರಾ.ಪಂ ಅಧ್ಯಕ್ಷ ಸಂಜೀವಕುಮಾರ ಭೂಸಾರೆ ‘ಆದಷ್ಟು ಬೇಗ ಕನ್ನಡ ಭವನಕ್ಕಾಗಿ ನಿವೇಶನವನ್ನು ಮಂಜೂರಾತಿ ನೀಡಲಾಗುವುದು’ ಎಂದು ತಿಳಿಸಿದರು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಬಸವಕುಮಾರ ಕವಟೆ, ಗೌರವ ಕಾರ್ಯದರ್ಶಿ ಬಸವರಾಜ ಪಾಟೀಲ, ಯುವ ಘಟಕದ ಅಧ್ಯಕ್ಷ ನಾಗೇಶ್ ಮೇತ್ರೆ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ದೇವಪ್ಪ, ವಲಯ ಘಟಕದ ಅಧ್ಯಕ್ಷ ದೀಪಕ ಪಾಟೀಲ, ಡಾ.ಧರ್ಮೇಂದ್ರ ಭೋಸ್ಲೆ, ಗುಲಾಂ ಇದ್ದರು.