ಬೀದರ್: ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗಲೇ ಪಿಎಸ್ಐ ಹುದ್ದೆಗಳು ಮಾರಾಟವಾಗಿವೆ. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಹಾಲಿನ ಕಾವಲಿಗೆ ಬೆಕ್ಕು ಕುಳಿತಿರುವಾಗ ತನಿಖೆ ಮಾಡುವವರು ಯಾರು’ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ನಗರದ ಪ್ರತಾಪನಗರದ ಬೆಲ್ದಾಳೆ ಕನ್ವೆನ್ಶನ್ ಹಾಲ್ನಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
‘ಒಳ್ಳೆಯ ನೌಕರಿ ಸಿಗಲಿ ಎಂದು ನಮ್ಮ ಮಕ್ಕಳನ್ನು ಚೆನ್ನಾಗಿ ಓದಿಸುತ್ತಿದ್ದೇವೆ. ಆದರೆ, ಬಿಜೆಪಿಯವರು ಓದುವ ಅಗತ್ಯವಿಲ್ಲ. ₹ 80 ಲಕ್ಷ ಕೊಟ್ಟರೆ ಸಾಕು ನಿಮ್ಮ ಮಗ ಪಿಎಸ್ಐ ಆಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲೂ ಎಡಿಜಿಪಿ ಜೈಲಿನಲ್ಲಿ ಇಲ್ಲ. ಕರ್ನಾಟಕದ ಎಡಿಜಿಪಿ ಜೈಲಿನಲ್ಲಿದ್ದಾರೆ’ ಎಂದು ಹೇಳಿದರು.
‘ಹಣ ಲೂಟಿ ಮಾಡಿದವರೇ ಸರ್ಕಾರದ ಹುದ್ದೆ ಮೇಲೆ ಕುಳಿತರೆ ತನಿಖೆ ನಡೆಸುವವರು ಯಾರು? ಲಂಚಕ್ಕಾಗಿ ಇಡೀ ಪ್ರದೇಶ ಮಾರಾಟ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಬಿಜೆಪಿ ಮುಖಂಡರು ಗುತ್ತಿಗೆದಾರರು ಅಷ್ಟೇ; ಅಲ್ಲ ಮಠಗಳನ್ನೂ ಬಿಟ್ಟಿಲ್ಲ. ಈ ಕುರಿತು ಗುತ್ತಿಗೆದಾರರು ಹಾಗೂ ಮಠಾಧೀಶರೇ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ದೂರು ನೀಡಿದ್ದಾರೆ. ಆದರೆ, ಮೋದಿ ಅವರು ಕರ್ನಾಟಕಕ್ಕೆ ಬಂದಾಗ ಈ ವಿಷಯವಾಗಿ ಮಾತನಾಡಲೇ ಇಲ್ಲ’ ಎಂದು ಟೀಕಿಸಿದರು.
‘ಚುನಾವಣೆ ನಡೆದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತಂದು. ಕುಟುಂಬದ ಮುಖ್ಯಸ್ಥ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹ 2 ಸಾವಿರ ಜಮಾ ಮಾಡಲಿದೆ’ ಎಂದು ತಿಳಿಸಿದರು.
‘ಅದಕ್ಕೂ ಮೊದಲು ಪ್ರತಿ ವಿಧಾನಸಭಾ ಕೇತ್ರಗಳಲ್ಲಿ 20 ತಂಡಗಳಲ್ಲಿ ಕಾರ್ಯಕರ್ತರು ಗೃಹಲಕ್ಷ್ಮಿ ಕಾರ್ಡ್ಗಳನ್ನು ಹಂಚಬೇಕು. 10 ದಿನಗಳಲ್ಲಿ ಹಂಚಿಕೆ ಕಾರ್ಯ ಪೂರ್ಣಗೊಳಿಸಬೇಕು. ಸರ್ಕಾರ ಬಂದ ತಕ್ಷಣ ನೇರವಾಗಿ ಹಣ ಜಮಾ ಮಾಡಲಾಗುವುದು. ಮಹಿಳೆಯರು ಸರ್ಕಾರದ ಬಳಿಗೆ ಹೋಗುವ ಅಗತ್ಯವಿಲ್ಲ’ ಎಂದರು.
‘ಕರ್ನಾಟಕದ ಬಜೆಟ್ ₹ 3 ಲಕ್ಷ ಕೋಟಿ ಇದೆ. ಬಿಜೆಪಿ ಶೇ 40ರಷ್ಟು ಕಮಿಷನ್ ಪಡೆಯುತ್ತಿದೆ. ಅದನ್ನು ತಡೆದರೆ ₹ 1.20 ಲಕ್ಷ ಕೋಟಿ ಉಳಿಯಲಿದೆ. ಯೋಜನೆಯಡಿ ₹ 25 ಸಾವಿರ ಕೋಟಿ ಖರ್ಚಾಗಲಿದೆ. ₹ 95 ಸಾವಿರ ಕೋಟಿ ಉಳಿಯಲಿದೆ. ಬಿಜೆಪಿ ಸರ್ಕಾರದ ಕಳ್ಳತನ ತಡೆದರೂ ಸಾಕು ರಾಜ್ಯ ಸಾಕಷ್ಟು ಅಭಿವೃದ್ಧಿಯಾಗಲಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಬ್ಬ ಶಾಸಕನೂ ಶೇ 1 ರಷ್ಟು ಲಂಚ ಪಡೆದರೂ ಪಕ್ಷದಿಂದಲೇ ಉಚ್ಚಾಟಿಸಲಾಗುವುದು’ ಎಂದು ತಿಳಿಸಿದರು.