ಬೆಂಗಳೂರು, ನ.1: ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಕುರಿತ ವಿಷಯವನ್ನು ಪಠ್ಯದಲ್ಲಿ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಸಾಧನೆಗಳ ಪಾಠವನ್ನು ಸೇರಿಸಲು ವಿವಿಧ ವಿಭಾಗಗಳು ಒತ್ತಾಯಿಸುತ್ತಿವೆ ಎಂದು ಬೊಮ್ಮಾಯಿ ಹೇಳಿದರು. “ಏನು ಸಾಧ್ಯವೋ ಅದನ್ನು ನಾವು ಮಾಡುತ್ತೇವೆ. ದಿವಂಗತ ನಟನಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು (ಮರಣೋತ್ತರವಾಗಿ) ಪ್ರದಾನ ಮಾಡುವುದು ಈ ಕನ್ನಡ ರಾಜ್ಯೋತ್ಸವದಲ್ಲಿ ಹೈಲೈಟ್ ಆಗಿದೆ. ಪುನೀತ್ ರಾಜ್ ಕುಮಾರ್ ಮಾನವೀಯ ಕೆಲಸ ಮಾಡಿದ್ದಾರೆ’ ಎಂದರು.
ಎಷ್ಟರ ಮಟ್ಟಿಗೆ ಅಂದರೆ ತಮ್ಮ ಅಂಗಾಂಗಗಳ ದಾನ ಮಾಡಿ ಮಾದರಿಯಾಗಿದ್ದಾರೆ. ಅವರು ತೀರಿ ಹೋದ ಮೇಲೆ ಹಲವರು ಕಣ್ಣು ದಾನ ಮಾಡುತ್ತಿದ್ದಾರೆ. ಪುನೀತ್ ಸಣ್ಣ ವಯಸ್ಸಲ್ಲೇ ಪ್ರೇರಣಾದಾಯಕ ಸಾಧನೆ ಮಾಡಿದರು ಎಂದು ಕೊಂಡಾಡಿದರು. ಶಾಲಾ ಪಠ್ಯದಲ್ಲಿ ಪುನೀತ್ ರಾಜ್ ಕುಮಾರ್ ಸಾಧನೆ, ಪ್ರೇರಣೆ ಕುರಿತ ಮಾಹಿತಿ ಸೇರಿಸಬೇಕು ಎನ್ನುವ ಮನವಿಗಳು ಬಂದಿವೆ. ಈ ಸಂಬಂಧ ಏನೆಲ್ಲ ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಲು ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಸರ್ಕಾರ ಶಾಸನವನ್ನು ತರಲಿದೆ ಎಂದು ಅವರು ಹೇಳಿದರು.