ಬೀದರ್: ಗ್ಯಾಸ್ ಅನಿಲ ಸಂಪರ್ಕ ಹೊಂದಿದವರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿ, ಅದರ ದಿನಾಂಕ ಕೂಡ ವಿಸ್ತರಿಸಿದೆ. ಆದರೆ, ಆ ವಿಷಯ ಹೆಚ್ಚಿನವರಿಗೆ ಗೊತ್ತಿಲ್ಲದ ಕಾರಣ ಜನ ಗ್ಯಾಸ್ ಏಜೆನ್ಸಿಗಳ ಕಚೇರಿ ಎದುರು ತಾ ಮುಂದು, ನಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ಗ್ಯಾಸ್ ಸಂಪರ್ಕ ಹೊಂದಿದ ಪ್ರತಿಯೊಬ್ಬರೂ ಡಿಸೆಂಬರ್ 31ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ತಿಳಿಸಲಾಗಿತ್ತು. ಬಳಿಕ ಸರ್ಕಾರ ಮತ್ತೊಂದು ಸುತ್ತೋಲೆ ಹೊರಡಿಸಿ, 2024ರ ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡಿಸಬೇಕೆಂದು ಸೂಚಿಸಿದೆ. ಆದರೆ, ದಿನಾಂಕ ವಿಸ್ತರಿಸಿದ ವಿಷಯದ ಕುರಿತು ಸೂಕ್ತ ರೀತಿಯಲ್ಲಿ ಪ್ರಚಾರವಾಗಿಲ್ಲ. ಜನರಿಗೆ ವಿಷಯ ತಿಳಿಯದ ಕಾರಣ ನಿತ್ಯ ಗ್ಯಾಸ್ ಏಜೆನ್ಸಿ ಕಚೇರಿಗಳಿಗೆ ದೌಡಾಯಿಸುತ್ತಿದ್ದಾರೆ. ದೈನಂದಿನ ಕೆಲಸ ಬಿಟ್ಟು ಅಲ್ಲಿಯೇ ಹೋಗುತ್ತಿರುವುದರಿಂದ ಕಚೇರಿಗಳ ಎದುರು ನಿತ್ಯ ಜನಜಾತ್ರೆ ಕಂಡು ಬರುತ್ತಿದೆ. ಅದರಲ್ಲೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಕಳೆದ ಎರಡ್ಮೂರು ದಿನಗಳಿಂದ ನಗರದ ಓಲ್ಡ್ ಸಿಟಿ ಸೇರಿದಂತೆ ಎಲ್ಲ ಗ್ಯಾಸ್ ಏಜೆನ್ಸಿಗಳ ಎದುರು ಭಾರಿ ಪ್ರಮಾಣದಲ್ಲಿ ಜನ ಸೇರುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ನೋಡಿ ಕೆಲವರು ಏನಾಗಿದೆ ಎಂದು ವಿಚಾರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಇ-ಕೆವೈಸಿ ಪೂರ್ಣಗೊಳಿಸಿದ ನಂತರ ₹500 ಬೆಲೆಗೆ ಒಂದು ಸಿಲಿಂಡರ್ ನೀಡುತ್ತಾರೆ. ಒಂದುವೇಳೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಂಪರ್ಕ ಕಡಿತಗೊಳಿಸುತ್ತಾರೆ ಎಂಬ ಸುಳ್ಳು ಸುದ್ದಿ ಕೂಡ ವ್ಯಾಪಕವಾಗಿ ಹರಡಿದೆ. ಜನ ಅದನ್ನೇ ಸತ್ಯವೆಂದು ನಂಬಿ ಬೇಗ ಇ-ಕೆವೈಸಿ ಮುಗಿಸಿ ಅದರ ಪ್ರಯೋಜನ ಪಡೆಯಬೇಕು. ಸಂಪರ್ಕ ಕಡಿತದಿಂದ ದೂರ ಇರಬೇಕು ಎಂಬ ಭಾವನೆಯಿಂದ ಗ್ಯಾಸ್ ಏಜೆನ್ಸಿಗಳಿಗೆ ಹೋಗುತ್ತಿದ್ದಾರೆ. ಇದರಿಂದ ಏಜೆನ್ಸಿಯವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನರನ್ನು ನಿಯಂತ್ರಿಸಲು ಹೆಣಗಾಟ ನಡೆಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
‘ಸರ್ಕಾರ ಇ-ಕೆವೈಸಿ ಕುರಿತು ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಎಲ್ಲರೂ ಸುಲಭವಾಗಿ ಮಾಡಿಸಬಹುದು. ಅನಗತ್ಯವಾಗಿ ಜನ ಸೇರುತ್ತಿದ್ದಾರೆ. ಕೇಳಬಾರದ ಪ್ರಶ್ನೆಗಳನ್ನೆಲ್ಲ ಕೇಳಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಗ್ಯಾಸ್ ಡೀಲರ್ ಒಬ್ಬರು ತಿಳಿಸಿದರು.