ಬಸವಕಲ್ಯಾಣ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಲಿಂಗಾಯತರಿಗೆ ಏನೂ ಕೊಡುಗೆ ನೀಡಿಲ್ಲ ಎಂದು ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಆರೋಪಿಸಿದರು.
ತಾಲ್ಲೂಕಿನ ಮೋರಖಂಡಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಈಶ್ವರ ಖಂಡ್ರೆ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಅವರು ಬೆಂಗಳೂರು, ಕಲಬುರಗಿ, ಬೀದರ್, ಭಾಲ್ಕಿಯಲ್ಲಿ ಸಮುದಾಯದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ಆರಂಭಿಸಿದ್ದಾರೆಯೇ? ಇತರೆ ಏನಾದರೂ ಕೆಲಸ ಮಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು.
‘ಹಿಂದಿನ ಚುನಾವಣೆಯಲ್ಲಿ ಈಶ್ವರ ಖಂಡ್ರೆ ನನ್ನ ವಿರುದ್ಧ ಸ್ಪರ್ಧಿಸಿ ಒಂದುವರೆ ಲಕ್ಷ ಮತಗಳಿಂದ ಸೋತರು. ಈಗ ಮಗ ಸಾಗರ ಮೂರು ಲಕ್ಷ ಅಂತರದಿಂದ ಸೋಲುವುದು ನಿಶ್ಚಿತ ಎಂಬುದು ಕಾರ್ಯಕರ್ತರ ಅನಿಸಿಕೆ. ನಾನು ಎರಡು ಸಲ ಸಂಸದನಾಗಿ ₹40 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಂಡಿದ್ದೇನೆ. ವಿಮಾನ ನಿಲ್ದಾಣ, ಸೈನಿಕ ಶಾಲೆ ಮಾಡಿದ್ದೇನೆ. ಆದರೂ, ಯಾವುದೇ ಕ್ಷೇತ್ರಕ್ಕೆ ಅನ್ಯಾಯ ಆಗಿರಬಹುದು. ಕಾರ್ಯಕರ್ತರು ತಪ್ಪು ತಿಳಿಯದೆ ನನ್ನನ್ನು ಗೆಲ್ಲಿಸಲು ಪ್ರಯತ್ನಿಸಬೇಕು’ ಎಂದು ಕೇಳಿಕೊಂಡರು.
ಶಾಸಕ ಶರಣು ಸಲಗರ ಮಾತನಾಡಿ,’ಹಿಂದಿನ ಚುನಾವಣೆಗಳಂತೆ ಈ ಸಲವೂ ಭಗವಂತ ಖೂಬಾ ಅವರಿಗೆ ಈ ತಾಲ್ಲೂಕಿನಲ್ಲಿ ಎಲ್ಲಕ್ಕಿಂತ ಹೆಚ್ಚಿನ ಮತಗಳನ್ನು ನೀಡಲಾಗುವುದು. ಇಡೀ ಜಗತ್ತು ನರೇಂದ್ರ ಮೋದಿ ಅವರ ಕಾರ್ಯವೈಖರಿ ಹೊಗಳುತ್ತಿದ್ದು ಮತದಾರರು ಸಹ ಅವರನ್ನು ನೋಡಿ ಬಿಜೆಪಿಗೆ ಮತ ಚಲಾಯಿಸಬೇಕು’ ಎಂದರು.
ಮಾಜಿ ಶಾಸಕ ಎಂ.ಜಿ. ಮುಳೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, ಅಮರನಾಥ ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಅರವಿಂದ ಮುತ್ತೆ, ಪ್ರಮುಖರಾದ ಪ್ರದೀಪ ವಾತಡೆ, ರವಿ ಚಂದನಕೆರೆ, ದೀಪಕ ಗಾಯಕವಾಡ, ಮಹಾದೇವ ಹಸೂರೆ, ಸುಧೀರ ಕಾಡಾದಿ, ಸೂರ್ಯಕಾಂತ ಚಿಲ್ಲಾಬಟ್ಟೆ, ಶಂಕರ ನಾಗದೆ, ದಿಗಂಬರ ಜಲ್ದೆ, ಸಂಜೀವ ಗಾಯಕವಾಡ, ಪ್ರದೀಪ ಗಡವಂತೆ, ಉಲ್ಕಾವತಿ ಬಿರಾದಾರ ಉಪಸ್ಥಿತರಿದ್ದರು.