ಮೈಸೂರು: ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೆಷನರಿ (ಕೆಪಿಎಸ್ ಸಿ) ಹುದ್ದೆಗಳ ಆಯ್ಕೆ ಪಟ್ಟಿ ಕಳ್ಳತನವಾಗಿದೆ ಎಂದು ಇತ್ತೀಚೆಗೆ ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಆದರೆ ಇಂತಹ ದೊಡ್ಡ ಹಗರಣಗಳನ್ನು ಪೊಲೀಸರಿಂದ ತನಿಖೆ ಮಾಡಲು ಆಗುವುದಿಲ್ಲ. ಬದಲಾಗಿ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ವಿಧಾನಪರಿಷತ್ ಸದ್ಯ ಅಡಗೂರು ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ನೇ ಇಸವಿಯಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಕಳವಾಗಿದೆ ಎಂದು ಸರ್ಕಾರ ದೂರು ನೀಡಿದೆ. ಇದರಿಂದ ಆ ಸಾಲಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಭವಿಷ್ಯ ಆಂತಕದಲ್ಲಿದೆ. ನಾಡಿನ ಜನರು ಮೂರ್ಖರೆಂದುಕೊಂಡು ಸರ್ಕಾರ ಸುಳ್ಳನ್ನು ಬಹಳ ಹೇಳುತ್ತಿದೆ.
ಆಯ್ಕೆ ಪಟ್ಟಿ ಕಳವಾದರೆ ಏನಂತೆ, ಹಾರ್ಡ್ಡಿಸ್ಕ್ ಇಲ್ಲವೆ, ಕಂಪ್ಯೂಟರ್ ಇಲ್ಲವೆ, ಗೂಗಲ್ ಡ್ರೈವ್ ಇಲ್ಲವೇ. ಇವುಗಳಲ್ಲಿ ಪಟ್ಟಿಯನ್ನು ಇಟ್ಟಿರಬಹುದಲ್ಲ. ಅಭ್ಯರ್ಥಿಗಳ ಅಂತಿಮ ಆಯ್ಕೆಯ ಅಖೈರು ಆಗುವವರೆಗೆ ಎಷ್ಟು ಹಂತದಲ್ಲಿ ಕಡತ ಓಡಾಡುತ್ತದೆ. ಎಷ್ಟು ಕರಡು (ಡ್ರಾಫ್ಟ್)ಗಳು ರಚನೆಯಾಗುತ್ತವೆ. ಅವುಗಳಲ್ಲಿ ಕೂಡ ಹೆಸರುಗಳು ಗೊತ್ತಾಗುತ್ತದೆ. ಆದರೆ ಸರ್ಕಾರ ಇದ್ಯಾವುದನ್ನು ಮಾಡದೇ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿರುವುದನ್ನು ನೋಡಿದರೆ ಇದರಲ್ಲಿ ಹಗರಣದ ವಾಸನೆ ಇದೆ ಎಂದರು.
ಈ ಪ್ರಕರಣದ ಹಿಂದೆ ಆಳುವ ಪಕ್ಷ ಹಾಗೂ ವಿರೋಧ ಪಕ್ಷದವರು ಸೇರಿದಂತೆ ದೊಡ್ಡ- ದೊಡ್ಡವರ ಕೈವಾಡ ಇದೆ. ಆದ್ದರಿಂದಲೇ ಯಾರೊಬ್ಬರು ಈ ವಿಚಾರವಾಗಿ ಮಾತನಾಡುತ್ತಿಲ್ಲ. ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡಾ ಮಾತನಾಡಿಲ್ಲ.
ಕೆಪಿಎಸ್ ಸಿ ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಇರುವ ಇಲಾಖೆ. ಅವರ ಗಮನಕ್ಕೂ ಬಾರದೆ ಇಷ್ಟೆಲ್ಲ ಆಗಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಸರ್ಕಾರದ ಬಳಿ ಐಟಿ ಇಲಾಖೆ ಇಲ್ಲವೇ ಅದಕ್ಕೊಬ್ಬರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಒಬ್ಬರು ಸಚಿವರು ಏತಕ್ಕಾಗಿ. ತಂತ್ರಜ್ಞಾನ ಉನ್ನತ ಮಟ್ಟದಲ್ಲಿ ಬೆಳವಣಿಗೆ ಹೊಂದಿರುವ ಈ ಕಾಲಘಟ್ಟದಲ್ಲಿ ಪಟ್ಟಿ ಕಳವಾಗಿದೆ ಎನ್ನುವುದು ಬಹಳ ಹಾಸ್ಯಾಸ್ಪದವಾಗಿದೆ ಎಂದು ಸರ್ಕಾರದ ನಡೆಯನ್ನು ಲೇವಡಿ ಮಾಡಿದರು. ಈ ದಿನ ರಾಜಕೀಯ ಕುರಿತು ಮಾತನಾಡುವುದಿಲ್ಲ. ಇನ್ನೆರಡು ದಿನದಲ್ಲಿ ನನ್ನ ತೀರ್ಮಾನಗಳ ಬಗ್ಗೆ ತಿಳಿಸುವುದಾಗಿ ಇದೇ ವೇಳೆ ಹೇಳಿದರು.