ಬೀದರ್: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಮೊದಲ ಹಂತದ ಪಟ್ಟಿ ಪ್ರಕಟಿಸಿದ ಸಂದರ್ಭದಲ್ಲಿ ಯಾವುದೇ ಅಪಸ್ವರ ಕೇಳಿ ಬರಲಿಲ್ಲ. ಆದರೆ, ಎರಡನೇ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಬೀದರ್ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಎರಡನೇ ಪಟ್ಟಿಯಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಅವರ ಹೆಸರು ಇಲ್ಲದ್ದನ್ನು ಕಂಡ ಅಭಿಮಾನಿಗಳು ಮಧ್ಯ ರಾತ್ರಿಯೇ ಸಾವಿರಾರು ಸಂಖ್ಯೆಯಲ್ಲಿ ಮಾಧವನಗರದ ಸೂರ್ಯಕಾಂತ ಅವರ ನಿವಾಸದ ಎದುರು ಜಮಾವಣೆಗೊಂಡು ಪಕ್ಷದ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಚುನಾವಣೆಯಲ್ಲೂ ಕೆಲ ಬಿಜೆಪಿ ಮುಖಂಡರೇ ಸೂರ್ಯಕಾಂತ ಗೆಲ್ಲದಂತೆ ನೋಡಿಕೊಂಡಿದ್ದರು. ಜಿಲ್ಲೆಯ ಹಿರಿಯ ಮುಖಂಡರೇ ಉದ್ದೇಶ ಪೂರ್ವಕವಾಗಿ ಟಿಕೆಟ್ ತಪ್ಪಿಸಿದ್ದಾರೆ. ನಾಗಮಾರಪಳ್ಳಿ ಕುಟುಂಬ ರಾಜಕೀಯವಾಗಿ ಬೆಳೆದರೆ ನಾವು ಮುಂದೆ ಬರುವುದು ಕಷ್ಟ ಎಂದು ದುಷ್ಟ ಶಕ್ತಿಗಳು ಸಂಘಟಿತವಾಗಿ ನಾಗಮಾರಪಳ್ಳಿ ಕುಟುಂಬ ವಿರೋಧಿ ಕೆಲಸ ಮಾಡಿವೆ ಎಂದು ಸೂರ್ಯಕಾಂತ ಬೆಂಬಲಿಗರು ಆಕ್ರೋಶ ಹೊರ ಹಾಕಿದರು.
‘ನಾನು ಯಾರಿಗೂ ಕೆಟ್ಟದ್ದು ಮಾಡಿಲ್ಲ. ನನಗೆ ಕೇಡು ಬಯಸಿದವರಿಗೂ ಒಳ್ಳೆಯದಾಗಲಿ ಎಂದೇ ಹಾರೈಸುವೆ. ಮುಖಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಪಕ್ಷದ ವರಿಷ್ಠರು ಕೊನೆಯ ಕ್ಷಣದ ವರೆಗೂ ನಿನಗೆ ಬೀದರ್ ಟಿಕೆಟ್ ದೊರೆಯಲಿದೆ ಎಂದು ಭರವಸೆ ಮೂಡಿಸಿದ್ದರು. ಇದೀಗ ಮೋಸ ಮಾಡಿದ್ದಾರೆ’ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಸೂರ್ಯಕಾಂತ ನಾಗಮಾರಪಳ್ಳಿ ಪ್ರತಿಕ್ರಿಯಿಸಿದರು.