ಬೀದರ್: ರಾಜ್ಯದಲ್ಲಿ 7ಲಕ್ಷ ಟನ್ ಅಕ್ಕಿ ಇದ್ದರೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ಈ ಸಂಬಂಧ ಬೀದರ್ ನಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರಕ್ಕೆ ಎಫ್ಸಿಐ ಅವರು ಅಕ್ಕಿ ಒದಗಿಸುವ ಭರವಸೆ ಕೊಟ್ಟನಂತರವೂ ಬಹಿರಂಗ ಹರಾಜಿನಲ್ಲಿ ರಾಜ್ಯ ಸರ್ಕಾರದವರಿಗೆ ಪರವಾನಿಗೆ ಕೊಡೋದಿಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರ ಹೇಳುತ್ತಿದೆ ಎಂದರು.
ರಾಜ್ಯದಲ್ಲಿ ಎಲ್ಲಿಯವರೆಗೆ ಅಕ್ಕಿ ವ್ಯವಸ್ಥೆ ಆಗುವದಿಲ್ಲವೋ, ಅಲ್ಲಿಯವರೆಗೆ ಬಡ ಜನರಿಗೆ ಧನಸಹಾಯ ಮಾಡುತ್ತೇವೆ. ಮೂರು ತಿಂಗಳಲ್ಲಿ ಅಕ್ಕಿ ಪೂರೈಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಇನ್ನು ಬಿಜೆಪಿಯವರಿಗೆ ಕೆಲಸ ಇಲ್ಲದ್ದಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಕೊಟ್ಟಿರುವ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. 15 ಲಕ್ಷ ರು. ಕೊಟ್ಟರಾ? 2ಕೋಟಿ ಉದ್ಯೋಗ? ಸೂರಿಲ್ಲದವರಿಗೆ ಸೂರು ಕೊಟ್ಟರಾ? ರೈತರ ಆದಾಯ ದುಪ್ಪಟ್ಟು ಮಾಡಿದ್ರಾ? ಸೋತಿದ್ದಾರೆ, ಹತಾಶ ಭಾವನೆಯಿಂದ ಏನೇನೋ ಹೇಳ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಕೇಳಿ ಕಮಲ ಪಾಳಯಕ್ಕೆ ಈಶ್ವರ ಖಂಡ್ರೆ ಟಾಂಗ್ ನೀಡಿದರು.