ಬೀದರ್: ಜಗತ್ತಿನಲ್ಲಿ ಕಾಡುತ್ತಿರುವ ಅನೇಕ ರೋಗಗಳಿಗೆ ಫರ್ಟಿಲೈಜರ್ ಭರಿತ ದವಸ ಧಾನ್ಯಗಳ ಸೇವನೆಯೇ ಕಾರಣವಾಗಿದ್ದು, ಇದರ ನಿರ್ಮೂಲನೆ ಸಿರಿಧಾನ್ಯದಿಂದ ಮಾತ್ರ ಸಾಧ್ಯ ಎಂಬುವುದೂ ಶತಸಿದ್ದ. ಈ ದಿಶೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದೆ.
ಈ ಹಿನ್ನಲೆಯಲ್ಲಿ ಸಿರಿಧಾನ್ಯಗಳಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುವ ಪದ್ಧತಿ ಹಾಗೂ ವಿವಿಧ ಪ್ರಕಾರದ ಸಿರಿಧಾನ್ಯಗಳ ಉತ್ಪಾದನೆ ವಿಶ್ವದಲ್ಲಿ ಆಕರ್ಷಿತ.
ಸುಮಾರು ನಾಲ್ಕು ಜನ ಯುವಕರು ಸೇರಿಕೊಂಡು 2021ರ ಮಾರ್ಚ್ 2ರಂದು ಆರಂಭವಾದ ಬೀದರ್ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ಮಹಿಳಾ ಕಿಸಾನ್ ಮಿಲ್ಲೆಟ್ಸ್ ಪ್ರೊಡ್ಯುಸರ್ ಕಂಪನಿಯು ವಾರ್ಷಿಕ ಲಕ್ಷಾಂತರ ರೂ. ವಹಿವಾಟು ನಡೆಸಿ, ದೇಶದ ತುಂಬೆಲ್ಲ ಸುದ್ದಿ ಮಾಡಿದೆ. ದೆಹಲಿ, ಬೆಂಗಳೂರು, ಹೈದ್ರಾಬಾದ್, ಬಸವಕಲ್ಯಾಣ ಹಾಗೂ ಬೀದರ್ ಮಾರುಕಟ್ಟೆ ಪ್ರಮುಖವಾಗಿದೆ.
ಪ್ರಧಾನಿ ಮೋದಿಯಿಂದಲೂ ಭೇಷ್ ಎನಿಸಿಕೊಂಡ ಕಂಪನಿ:
ಈ ಕಂಪನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ನಲ್ಲಿ ಅನೇಕ ಸಲ ಉಲ್ಲೇಖಿಸಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಪ್ರಚಾರ ಕಂಡಿರುವ ಈ ಮಹಿಳಾ ಸಂಘದ ಸಿರಿಧಾನ್ಯ ಸಾಧನೆಗೆ ವಿಶ್ವದ ಹಲವಾರು ದೇಶದ ಪ್ರತಿನಿಧಿಗಳು ಬಂದು, ಈ ಘಟಕವನ್ನು ನೋಡಿ ತಿಳಿದುಕೊಳ್ಳುತ್ತಿದ್ದಾರೆ.
ಸಿರಿಧಾನ್ಯಗಳಾದ ರಾಗಿ, ಜೋಳ, ಅರಕಾ, ಸಾಮೆ, ಸಜ್ಜೆ, ನವಣೆ, ಉರುಲು, ಬರ್ಗು ಹೀಗೆ 9 ಬಗೆಯ ಸಿರಿಧಾನ್ಯಗಳಿಂದ 22 ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದ್ದು, ಇದರಲ್ಲಿ ಪ್ರಮುಖವಾಗಿ ರಾಗಿ ಮಿಲೆಟ್, ಅರಕಾ ಉಪ್ಪಿಟ್ಟು, ರಾಗಿ ಹಿಟ್ಟು, ಜೋಳದ ಹಿಟ್ಟು, ಸಜ್ಜೆ ಹಿಟ್ಟು ತಯಾರಿಸಿ, ತಮ್ಮದೇ ಬ್ರ್ಯಾಂಡ್ ಹೆಸರಲ್ಲಿ ಮಾರಲಾಗುತ್ತಿದೆ.
ವಿದೇಶದಿಂದಲೂ ರೈತರು, ಅಧಿಕಾರಿಗಳ ಭೇಟಿ:
ಇಲ್ಲಿಯ ಸಿರಿಧಾನ್ಯಗಳ ಕುರಿತು ದೇಶ, ವಿದೇಶಿ ರೈತರಿಗೆ ಸಿರಿಧಾನ್ಯಗಳ ತರಬೇತಿ ನೀಡುತ್ತಿದ್ದಾರೆ. ರೈತ ಉತ್ಪಾದಕ ಸಂಸ್ಥೆ ಉತ್ತೇಜಿಸುವಲ್ಲಿ ಎದುರಿಸುತ್ತಿರುವ ತೊಂದರೆ ಮತ್ತು ಸವಾಲುಗಳ ಕುರಿತು ಅಂತರಾಷ್ಟ್ರೀಯ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಇಲ್ಲಿಯೇ ನಡೆದು ನೈಜೇರಿಯಾ, ಸುಡಾನ್, ದಕ್ಷಿಣ ಸುಡಾನ್, ಉಗಾಂಡ, ನೇಪಾಳ, ತಜಕಿಸ್ತಾನ್, ಕಜಕಿಸ್ತಾನ್, ತಾಂಜಾನಿಯಾ, ಉಜ್ಬೇಕಿಸ್ತಾನ್, ಮೊಜಾಂಬಿಕ್, ಅಜರ್ಬೈಜಾನ್, ಬಾಂಗ್ಲಾದೇಶ, ಘಾನಾ, ಇಥಿಯೋಪಿಯಾ, ದಕ್ಷಿಣ ಆಫ್ರಿಕಾ ಮತ್ತು ಝಾಂಬಿಯಾ ದೇಶದ ನೀತಿ ಸಂಯೋಜಕರು, ಆಡಳಿತ ಮಂಡಳಿ, ಸಂಶೋಧಕರು, ಹಿರಿಯ ಅಧಿಕಾರಿಗಳು ಸೇರಿ 27 ಅಂತರಾಷ್ಟ್ರೀಯ ಪ್ರತಿನಿಧಿಗಳು ಭಾರತೀಯ ಸಿರಿ ಧಾನ್ಯ ಸಂಶೋಧನಾ ಸಂಸ್ಥೆ ಹೈದ್ರಾಬಾದ್ ವತಿಯಿಂದ ರಚನೆಯಾದ ಹುಲಸೂರ ಮಹಿಳಾ ಕಿಸಾನ್ ಮಿಲ್ಲೆಟ್ಸ್ ಪ್ರೊಡ್ಯುಸರ್ ಕಂಪನಿಗೆ ಭೇಟಿ ನೀಡಿ ಸಿರಿಧಾನ್ಯಗಳ ಮಹತ್ವ, ಮಾರಾಟ ಮಾಹಿತಿ ಕಲೆ ಹಾಕಿದ್ದಾರೆ.