ಬೀದರ್: ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಅನುಭವ ಮಂಟಪ ಕಟ್ಟಡ ಕಾಮಗಾರಿಗೆ ಇನ್ನಷ್ಟು ಚುರುಕು ಮುಟ್ಟಿಸಿ, ನಮ್ಮ ಅವಧಿಯಲ್ಲಿ ಉದ್ಘಾಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಶ್ರೀಗಳ ಆಶೀರ್ವಾದ ಪಡೆದು ಅವರು ಮಾತನಾಡಿದರು.
2013ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಹಿರಿಯ ಸಾಹಿತಿ ಗೊರುಚ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ ವಿನ್ಯಾಸ ಸಿದ್ಧಪಡಿಸಿ ಅನುದಾನ ಕೂಡ ಘೋಷಣೆ ಮಾಡಿತ್ತು. ಯೋಗಾ ಯೋಗ ಎಂಬಂತೆ ರಾಜ್ಯದಲ್ಲಿ ಮತ್ತೆ ಐದು ವರ್ಷಗಳ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಗ ಪ್ರಗತಿಯಲ್ಲಿರುವ ಅನುಭವ ಮಂಟಪ ಕಾಮಗಾರಿ ನಮ್ಮ ಕಾರ್ಯಕಾಲದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಡಾ. ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಮತ್ತು ನಮ್ಮ ತಂದೆ ಭೀಮಣ್ಣ ಖಂಡ್ರೆ ಮಾರ್ಗದರ್ಶದಲ್ಲಿ ನನ್ನ ರಾಜಕೀಯ ಬೆಳವಣಿಗೆ ಕಂಡಿದ್ದೇನೆ. ರಾಜ್ಯದಲ್ಲಿ ಎರಡನೇ ಬಾರಿಗೆ ಸಚಿವನಾಗುವ ಅವಕಾಶ ನನಗೆ ಸಿಕ್ಕಿದೆ. ಈ ಬಾರಿ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವನಾಗಿದ್ದು ಜಿಲ್ಲೆ ಸಂಪೂರ್ಣ ಹಸಿರೀಕರಣ ಮಾಡುವ ಸಂಕಲ್ಪ ಹೊತ್ತಿದ್ದು ಇದಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, 70ರ ದಶಕದಲ್ಲಿ ಭೀಮಣ್ಣ ಖಂಡ್ರೆ ಅವರು ಶಾಸಕರಾಗಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜನಪರ ಕಾರ್ಯ ಮಾಡಿದ್ದರು. ಅವರಂತೆ ಈಶ್ವರ ಖಂಡ್ರೆ ಅವರು ಕೂಡ ಜನಮನ್ನಣೆ ಗಳಿಸಿ ರಾಜಕೀಯ ಏಳಿಗೆ ಕಾಣುತ್ತಿರುವುದು ಸಂತಸ ತಂದಿದೆ ಎಂದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಸಚಿವ ಈಶ್ವರ ಖಂಡ್ರೆ ಅವಧಿಯಲ್ಲಿ ಜಿಲ್ಲೆ, ರಾಜ್ಯದಲ್ಲಿ ಹಸಿರು, ಪರಿಸರ ಪೂರಕ ವಾತಾವರಣ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಬಸವಲಿಂಗ ದೇವರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ, ಪುರಸಭೆ ಸದಸ್ಯ ಬಸವರಾಜ ವಂಕೆ, ರಾಜಕುಮಾರ ಬಿರಾದಾರ, ಸಂಗಮೇಶ ವಾಲೆ, ರಾಜು ಜುಬರೆ, ಬಾಬು ಬೆಲ್ದಾಳ ಸೇರಿದಂತೆ ಹಲವರು ಇದ್ದರು.