ಬೀದರ್/ಚಿಟಗುಪ್ಪ: ಮಹಾರಾಷ್ಟ್ರ ಸರಕಾರ ಲಿಂಗಾಯತ ಧರ್ಮದ ಉನ್ನತಿಗಾಗಿ “ಬಸವೇಶ್ವರ ಆರ್ಥಿಕ ವಿಕಾಸ ಮಹಾಮಂಡಳ ಘೋಷಣೆ” ಮಾಡಿ ಎರಡು ನೂರು ಕೋಟಿ ಅನುದಾನ ನೀಡಲು ಬಜೆಟ್ ನಲ್ಲಿ ಪ್ರಸ್ತಾವನೆ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸಾಹಿತಿ, ಸಮಾಜ ಸೇವಕರಾದ ಸಂಗಮೇಶ ಎನ್ ಜವಾದಿ ನುಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಜೆಟ್ ನಲ್ಲಿ ಮಂಡನೆ ಮಾಡಿ, ಇಡೀ ಲಿಂಗಾಯತ ಧರ್ಮದವರ ಹೃದಯ ಗೆದ್ದ ಮಾಹಾರಾಷ್ಟ್ರ ಸರ್ಕಾರಕ್ಕೆ ಹಾಗೂ ಲಿಂಗಾಯತ ಧರ್ಮದ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಸರ್ವರಿಗೂ ಅಭಿನಂದನೆಗಳು ಸಲ್ಲಿಸುತ್ತೇವೆ.
ಲಿಂಗಾಯತರ ಸ್ಥಿತಿ ಗತಿ, ಲಿಂಗಾಯತ ಧರ್ಮ ಮಾನ್ಯತೆ, ಮೀಸಲಾತಿ ಸೇರಿದಂತೆ ಸಮತಾವಾದ ಸಾರುವ ಬಸವ ತತ್ವ ಸಿದ್ಧಾಂತಗಳನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ಕಾರ್ಯ ಮಹಾರಾಷ್ಟ್ರ ಸರ್ಕಾರ ಇನ್ನು ಹೆಚ್ಚಿನ ರೀತಿಯಲ್ಲಿ ಮಾಡಲಿ ಎಂದು ಪ್ರಾರ್ಥಿಸುತ್ತೇವೆ.
ಅದೇ ರೀತಿ ಕೇಂದ್ರ ಸರ್ಕಾರವು ಸಹ ರಾಷ್ಟ್ರ ಮಟ್ಟದಲ್ಲಿ ಬಸವ ಜಯಂತಿ ಆಚರಣೆ ಮಾಡಬೇಕು. ಬಸವಕಲ್ಯಾಣ ಹಾಗೂ ಕೂಡಲಸಂಗಮ ಕ್ಷೇತ್ರಗಳು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ತಾಣವಾಗಿ ಘೋಷಣೆ ಮಾಡಬೇಕು. ಬಸವಕಲ್ಯಾಣವನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು ಎನ್ನುವುದು ಸೇರಿದಂತೆ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಂದಾಗಬೇಕಾಗಿದೆ.
ಇದಲ್ಲದೆ ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ಗಣ್ಯರ ಹಾಗೂ ಬಸವ ತತ್ವ ಪ್ರಚಾರ ಗೈಯುತ್ತಿರುವ ಶರಣರ ಮೇಲೆ ಮಾರಣಾಂತಿಕವಾಗಿ ಹಲ್ಲೇ, ನಿಂದನೆ, ಅಪಮಾನ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಫೇಸ್ ಬುಕ್, ವಾಟ್ಸಾಪ್, ಮೆಸೆಂಜರ್ ನಲ್ಲಿಯೂ ಸಹ ಕೆಲವರಿಂದ ಹೀಯಾಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಖಂಡನೀಯ ನಡೆ, ಹೀನ್ ಪದ್ಧತಿ, ಪ್ರಜಾಪ್ರಭುತ್ವಕ್ಕೆ ದಕ್ಕೆ ತರುವ ಕೆಲಸ ಕೆಲ ಕುತಂತ್ರಗಳಿಂದ ನಿರಂತರವಾಗಿ ಆಗುತ್ತಿರುವುದು ಇಂದಿನ ಆಧುನಿಕ ಸಮಾಜಕ್ಕೆ ನಾಚಿಕೆ ತರುವ ಹಾಗೂ ತಲೆ ತಗ್ಗಿಸುವ ಘಟನೆ ಇದಾಗಿದೆ. ಇನ್ನು ಶರಣರ ಸ್ಮಾರಕಗಳು ಅಲ್ಲಲ್ಲಿ ನಾಶ ಮಾಡುತ್ತಿರುವುದು ಸಹ ಕಾಣುತ್ತಿದ್ದೇವೆ ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ರಾಜ್ಯ ಸರಕಾರ ಈ ಕೂಡಲೇ ಎಲ್ಲಾ ಘಟನೆಗಳು ತಡೆಗಟ್ಟುವ ಕೆಲಸ ಮಾಡಬೇಕು. ಶರಣರ ಮೇಲೆ ಆಗುತ್ತಿರುವ ಅನ್ಯಾಯಗಳನ್ನು ಪತ್ತೆ ಹಚ್ಚಿ, ಷಡ್ಯಂತ್ರ, ಕುಕೃತ್ಯಕ್ಕೆ ಕಾರಣವಾದವರನ್ನೂ ಬಂಧಿಸಬೇಕು.
ಅದೇ ರೀತಿ ದುಷ್ಟ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಆದಷ್ಟು ಬೇಗ ದುಷ್ಕರ್ಮಿಗಳನ್ನು ನಿಗ್ರಹಿಸುವ ಕೆಲಸ ರಾಜ್ಯ ಸರಕಾರ ಶೀಘ್ರವಾಗಿ ಮಾಡಬೇಕು ಎಂದು ಸಂಗಮೇಶ ಎನ್ ಜವಾದಿ ಯವರು ಆಗ್ರಹಿಸಿದ್ದಾರೆ.