ಚಿಟಗುಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಹೋಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದ ಸಂಜೆ ಯವರೆಗೆ ಮಕ್ಕಳು ಹಾಗೂ ಯುವಕರು ಬಣ್ಣದಾಟದಲ್ಲಿ ತೊಡಗಿದ್ದರು.
ವಿವಿಧೆಡೆ ಬೆಳಿಗ್ಗೆ 7 ಗಂಟೆಯಿಂದಲೇ ಮಕ್ಕಳು ಬಣ್ಣ ಹಿಡಿದು ಬೀದಿಗೆ ಬಂದು ಹೋಳಿ ಹುಣ್ಣಿಮೆಗೆ ಚಾಲನೆ ನೀಡಿದರು.
10 ಗಂಟೆ ಹೊತ್ತಿಗೆ ದೊಡ್ಡವರೂ ಹೊರಬಂದು ಬಣ್ಣದಾಟಕ್ಕೆ ಮೆರುಗು ನೀಡಿದರು. ಯುವಕ-ಯುವತಿಯರು ಗುಂಪು ಗುಂಪಾಗಿ ಸಮೀಪದ ಗೆಳೆಯರ ಮನೆಗಳಿಗೆ ತೆರಳಿ ಬಣ್ಣ ಎರಚಿ ಸಂಭ್ರಮಿಸಿದರು. ಬಣ್ಣ ಹಚ್ಚಿಕೊಂಡು ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಯುವಕರ ಗುಂಪು ಹೋಳಿಗೆ ವಿಶೇಷ ಮೆರುಗು ತಂದುಕೊಟ್ಟಿತು.
ತಾಲ್ಲೂಕಿನ ಬೆಮಳಖೇಡಾ, ಕುಡಂಬಲ್, ನಿರ್ಣಾ, ನಾಗನಕೇರಾ, ಬನ್ನಳ್ಳಿ ಸೇರಿ ಇತರ ಗ್ರಾಮಗಳಲ್ಲಿ ಸಂಜೆ 4 ರಿಂದ ಕೋಲಾಟ ನಡೆಯಿತು. ಯುವಕರು ತಾಳಕ್ಕೆ ತಕ್ಕಂತೆ ಕೋಲಾಟವಾಡುತ್ತಿದ್ದರೆ ಹಿರಿಯರು ಜಾನಪದ ಗೀತೆಗಳನ್ನು ಹಾಡಿದರು. ಮಕ್ಕಳು ಹಾಗೂ ಮಹಿಳೆಯರು ಮನೆಯ ಮಾಳಿಗೆಗಳಲ್ಲಿ ಕುಳಿತು ಕೋಲಾಟ ವೀಕ್ಷಿಸಿದರು. ಮಧ್ಯದಲ್ಲಿ ರಾಮ-ಸೀತೆ, ಹನುಮ, ಲಕ್ಷ್ಮಣರ ವೇಷ ಧರಿಸಿ ಮೆರವಣಿಗೆ ಮೂಲಕ ಆಗಮಿಸಿದ ಪಾತ್ರಧಾರಿಗಳು ಕೋಲಾಟದಲ್ಲಿ ಸೇರಿಕೊಂಡು ಪ್ರೇಕ್ಷಕರಿಗೆ ಖುಷಿಕೊಡುತ್ತಿದ್ದರು.
ತಾಲ್ಲೂಕಿನ ಚಾಂಗಲೇರಾದ ವೀರಭದ್ರೇಶ್ವರ ದೇಗುಲ ಹಾಗೂ ರಾಮಪುರದ ರಾಮಲಿಂಗೇಶ್ವರ ದೇಗುಲಗಳಲ್ಲಿ ಬೆಳಿಗ್ಗೆ ದೇವರಿಗೆ ಅಭಿಷೇಕ ಪೂಜೆ ಜರುಗಿತು.