ಬೀದರ್: ‘ಯಾವುದೇ ಧರ್ಮ, ಜಾತಿಯ ಬಡವರಿದ್ದರೂ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ₹ 2 ಸಾವಿರದಂತೆ ವರ್ಷಕ್ಕೆ ₹ 24 ಸಾವಿರ ಆರ್ಥಿಕ ನೆರವು ಒದಗಿಸಲಾಗುವುದು. ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಹಾಗೂ ಬಡವರಿಗೆ 10 ಕೆ.ಜಿ. ಅಕ್ಕಿ ಉಚಿತವಾಗಿ ಕೊಡಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ ಜೋಕರ್ ಇದ್ದ ಹಾಗೆ. ರಸ್ತೆ, ಗಟಾರ ನಿರ್ಮಾಣಕ್ಕಿಂತ ಲವ್ ಜಿಹಾದ್ ವಿರೋಧಿಸುವುದು ಮಹತ್ವದ್ದು ಎಂದು ಈಚೆಗೆ ಹೇಳಿಕೆ ಕೊಟ್ಟಿದ್ದಾರೆ. ಜನರನ್ನು ಎತ್ತಿ ಕಟ್ಟುವುದೇ ಅವರ ಕೆಲಸವಾಗಿದೆ. ನಾಡಿನ ಅಭಿವೃದ್ಧಿ ಚಿಂತನೆ ಮಾಡದವರಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.
‘ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ದ್ವೇಷದ, ಹಿಂದುತ್ವದ, ಕೋಮುವಾದದ, ಸಮಾಜ ಒಡೆಯುವ ರಾಜಕಾರಣವೇ ಇದಕ್ಕೆ ಕಾರಣ’ ಎಂದು ಹೇಳಿದರು.
‘ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ಆದರೆ, ಸಂವಿಧಾನ ರಚನೆಯಾದ ಮೇಲೆ ಹೆಗಡೆವಾರ, ವಿ.ಡಿ. ಸಾವರಕರ್, ಗೋಲವಾಲ್ಕರ್ ಹಾಗೂ ಘೋಡ್ಸೆ ಅವರು ಸಂವಿಧಾನದ ವಿರುದ್ಧವಾಗಿಯೇ ಮಾತನಾಡಿದ್ದಾರೆ. ಬಿಜೆಪಿಗೆ ಇಂಥವರೇ ಆರಾಧ್ಯ ದೈವಗಳು. ಮಹಾತ್ಮರನ್ನು ಕೊಂದವರನ್ನೇ ಪೂಜೆ ಮಾಡುತ್ತಿದೆ. ಬಿಜೆಪಿಯವರು ಇವರ ವಂಶಸ್ಥರೇ ಆಗಿದ್ದಾರೆ’ ಎಂದು ಮೊಣಚಾದ ಮಾತಿನಿಂದ ಚುಚ್ಚಿದರು.
‘ಗೊಂಡ, ರಾಜಗೊಂಡ, ಕುರುಬರು, ಕೋಲಿ ಸಮಾಜದವರನ್ನು ಎಸ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮೂರು ಬಾರಿ ಶಿಫಾರಸು ಮಾಡಿದ್ದೆ. ಆದರೆ, ಡಬಲ್ ಎಂಜಿನ್ ಸರ್ಕಾರ ಇನ್ನೂ ಅನುಮೋದನೆ ಕೊಟ್ಟಿಲ್ಲ. ನಿಮಗೆ ಸ್ವಾಭಿಮಾನ ಇದ್ದರೆ ಒಂದು ಮತವನ್ನೂ ಬಿಜೆಪಿಗೆ ಕೊಡಬೇಡಿ’ ಎಂದು ಮನವಿ ಮಾಡಿದರು.
‘ಮೋದಿ ಮಾಡುವುದೊಂದು, ಹೇಳುವುದು ಇನ್ನೊಂದು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಿದ್ದಾರೆ.
ಆದರೆ, ವಿಜಯಪುರದ ಶಾಸಕ ಬಸವರಾಜ ಪಾಟೀಲ ಯತ್ನಾಳ ಟೋಪಿ ಹಾಕಿಕೊಂಡವರು ನಮ್ಮ ಕಚೇರಿಗೆ ಬರಬೇಡಿ ಎಂದು ಹೇಳುತ್ತಾರೆ. ಬಿಜೆಪಿ ಎಂದರೆ ಸುಳ್ಳಿನ ದೊಡ್ಡ ಫ್ಯಾಕ್ಟರಿ’ ಎಂದು ಕಟುವಾಗಿ ಟೀಕಿಸಿದರು.