ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ಸಮ್ಮೇಳನದಲ್ಲಿ ಭಾನುವಾರ ಸಾಂಘಿಕ ಚಟುವಟಿಕೆಗಳ ಮೂಲಕ ಕ್ರಿಯಾಶೀಲವಾಗಿ ಕೆಲಸ ಮಾಡುವ ಜಿಲ್ಲಾ ಸಂಘಕ್ಕೆ ನೀಡುವ ಪ್ರೋತ್ಸಾಹ ಪ್ರಶಸ್ತಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಪ್ರದಾನ ಮಾಡಲಾಯಿತು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ರಾಜ್ಯ ಸಮಿತಿ ಸದಸ್ಯ ಬಿ. ರಾಘವೇಂದ್ರ ಪ್ರಶಸ್ತಿ ಸ್ವೀಕರಿಸಿದರು.
ಇದಲ್ಲದೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಪ್ರತಿ ವರ್ಷ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಮೈಸೂರು ಜಿಲ್ಲೆಯ ಪತ್ರಕರ್ತರು ಸ್ವೀಕರಿಸಿದರು.
ಅತ್ಯುತ್ತಮ ರಾಜಕೀಯ ವಿಮರ್ಶೆಗಾಗಿ ಖಾದ್ರಿ ಶಾಮಣ್ಣ ಪ್ರಶಸ್ತಿ ಮೈಸೂರು ಉದಯವಾಣಿ ಹಿರಿಯ ವರದಿಗಾರ ಕೂಡ್ಲಿ ಗುರುರಾಜ್, ಅತ್ಯುತ್ತಮ ಸ್ಕೂಪ್ ವರದಿಗಾಗಿ ಬಿ.ಎಸ್. ವೆಂಕಟರಾಂ ಪ್ರಶಸ್ತಿಯನ್ನು ಮೈಸೂರು ಕನ್ನಡಪ್ರಭ ಹಿರಿಯ ಉಪಸಂಪಾದಕ ಎಲ್.ಎಸ್.ಶ್ರೀಕಾಂತ್, ಅತ್ಯುತ್ತಮ ಕ್ರೀಡಾ ವರದಿಗಾಗಿ ನೆಟ್ಟಕಲ್ಲಪ್ಪ ಪ್ರಶಸ್ತಿಯನ್ನು ಮೈಸೂರಿನ ವಿಜಯವಾಣಿ ವರದಿಗಾರ ಅವಿನಾಶ್ ಜೈನಹಳ್ಳಿ, ಅತ್ಯುತ್ತಮ ಸುದ್ದಿಚಿತ್ರಕ್ಕಾಗಿ ಬಂಡಾಪುರ ಮುನಿರಾಜು ಪ್ರಶಸ್ತಿಯನ್ನು ಸ್ಟಾರ್ ಆಫ್ ಮೈಸೂರ್ ನ ಛಾಯಾಗ್ರಾಹಕ ಎಂ.ಎನ್.ಲಕ್ಷ್ಮೀನಾರಾಯಣ ಯಾದವ್, ಅರಣ್ಯ ಕುರಿತ ಆರ್.ಎಲ್.ವಾಸುದೇವರಾವ್ ಪ್ರಶಸ್ತಿಯನ್ನು ಹುಣಸೂರಿನ ಎಸ್.ಎಸ್.ಸಚ್ಛಿತ್ ಹಾಗೂ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ವಿಶೇಷ ಸೇವೆಗಾಗಿ ನೀಡುವ ವಿಶೇಷ ಪ್ರಶಸ್ತಿಯನ್ನು ರಾಜ್ಯಧರ್ಮ ಪತ್ರಿಕೆಯ ಪ್ರದಾನ ಸಂಪಾದಕರಾದ ಮಹಿಮಹೇಶ್ ಅವರು ಸ್ವೀಕರಿಸಿದರು.