ಬೀದರ್: ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್ನಿಂದ ನಗರದಲ್ಲಿ ಶುಕ್ರವಾರ ಜಗನ್ನಾಥ ದೇವರ ರಥಯಾತ್ರೆ ಸಡಗರ, ಸಂಭ್ರಮದ ನಡುವೆ ಜರುಗಿತು. ಮಧ್ಯಾಹ್ನ ನಗರದ ರಾಂಪೂರೆ ಕಾಲೊನಿಯಲ್ಲಿರುವ ಸತ್ಯನಾರಾಯಣ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ತೇರಿನಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಯಿತು.
ಹೂಗಳಿಂದ ಅಲಂಕರಿಸಿದ ಸುಂದರ ತೇರನ್ನು ಭಕ್ತರು ಶ್ರದ್ಧಾ, ಭಕ್ತಿಯಿಂದ ಎಳೆದರು. ತೇರು ಹಾದು ಹೋಗುವ ಮಾರ್ಗದಲ್ಲಿ ಭಕ್ತರು ರಂಗೋಲಿ ಹಾಕಿ ಸ್ವಾಗತಿಸಿದರು. ದೇವರ ಮೇಲೆ ಪುಷ್ಪವೃಷ್ಟಿ ಮಾಡಿ ಭಕ್ತಿ ತೋರಿದರು. ಜಗನ್ನಾಥ ದೇವರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಹಾಕಿದರು. ಮಹಿಳೆಯರು ಕೂಡ ತೇರು ಎಳೆದು ಹರಕೆ ತೀರಿಸಿದರು.
ಮನ್ನಳ್ಳಿ ರಸ್ತೆ, ವಿದ್ಯಾನಗರ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಸಿದ್ದಾರ್ಥ ಕಾಲೇಜು ಮೂಲಕ ನಗರ ಹೊರವಲಯದ ಮಾಮನಕೇರಿಯಲ್ಲಿರುವ ಜಗನ್ನಾಥ ಮಂದಿರದ ವರೆಗೆ ಜರುಗಿತು.
ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಟ್ರಸ್ಟ್ ಪ್ರಮುಖರಾದ ವೀರಶೆಟ್ಟಿ ಮಣಗೆ, ಶಿವರಾಮ ಜೋಶಿ, ರಾಮಕೃಷ್ಣ ಕಾಳೇಕರ್, ಸೋಮನಾಥ ಪಾಟೀಲ, ರಾಜಕುಮಾರ ಅಳ್ಳೆ ಸೇರಿದಂತೆ ಹಲವರು ದೇವರ ಚಿಕ್ಕ ಮೂರ್ತಿಗಳನ್ನು ಹಿಡಿದುಕೊಂಡು ಭಕ್ತಿಯಿಂದ ಹೆಜ್ಜೆ ಹಾಕಿದರು.
ಸಂಜೆ ಕುಂಭ ಕಲಶ, ಚಕ್ರಿ ಭಜನೆ ಕಾರ್ಯಕ್ರಮಗಳು ಜರುಗಿದವು. ಜನವರಿ 8ರ ವರೆಗೆ ನಿತ್ಯ ಪೂಜೆ, ಧಾರ್ಮಿಕ ಉಪನ್ಯಾಸ, ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಅನಂತರ ಪ್ರವಚನ, ಉಷಾ ಪ್ರಭಾಕರ್ ಅವರ ತಂಡದಿಂದ ನೃತ್ಯ, ಜಗನ್ನಾಥ ನಾನಕೇರಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.