ಬೀದರ್: ‘ಬೀದರ್ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ರಹೀಂ ಖಾನ್ ಮದುವೆ ಮನೆಯಲ್ಲಿ ಊಟ ಮಾಡುವುದನ್ನು ಬಿಟ್ಟರೆ ಸಾರ್ವಜನಿಕರಿಗೆ ಅನುಕೂಲವಾಗುವಂಥ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ’ ಎಂದು ಬೀದರ್ ಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿದ ನಂತರ ಮೊದಲ ಬಾರಿಗೆ ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿ ನಡೆಸಿದ ಅವರು, ‘ಶಾಸಕರ ನಿರ್ಲಕ್ಷ್ಯದಿಂದಾಗಿ ವಸತಿ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ ಒಂದು ಸಾವಿರ ಮನೆಗಳ ಅನುದಾನ ಕೇಂದ್ರಕ್ಕೆ ವಾಪಸ್ ಹೋಗಿದೆ. ಬಡವರಿಗೆ ಮಂಜೂರು ಮಾಡಿಸಿಕೊಟ್ಟಿದ್ದರೆ ಎಷ್ಟೋ ಅನುಕೂಲವಾಗುತ್ತಿತ್ತು’ ಎಂದರು.
‘ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಎಲ್ಲ ಸಮುದಾಯಗಳ ಜನ ನನ್ನನ್ನು ಸಂಪರ್ಕಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಗುರುಪಾದಪ್ಪ ನಾಗಮಾರಪಳ್ಳಿ ಅಭಿಮಾನಿಗಳು ಹಾಗೂ ನನ್ನ ಬೆಂಬಲಿಗರ ಅಭಿಪ್ರಾಯ ಪಡೆದ ನಂತರವೇ ನಾನು ಜೆಡಿಎಸ್ ಸೇರಿದ್ದೇನೆ’ ಎಂದು ತಿಳಿಸಿದರು.
‘2018ರ ಚುನಾವಣೆಯಲ್ಲಿ ಖಾನ್ ಓಲ್ಡ್ಸಿಟಿಯೊಂದರಲ್ಲೇ 30 ಸಾವಿರ ಮತ ಪಡೆದಿದ್ದರೆ, ನನಗೆ 7 ಸಾವಿರ ಮತಗಳು ಬಂದಿದ್ದವು. ಈ ಬಾರಿ ಓಲ್ಡ್ಸಿಟಿಯ ನಗರಸಭೆ ಸದಸ್ಯರು ನನ್ನ ಬೆಂಬಲಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಓಲ್ಡ್ಸಿಟಿಯಲ್ಲಿ ನನಗೆ 30 ಸಾವಿರ ಮತಗಳು ಸಹಜವಾಗಿಯೇ ಬರಲಿವೆ. ಕಾಂಗ್ರೆಸ್ 7 ಸಾವಿರಕ್ಕಿಂತಲೂ ಕಡಿಮೆ ಮತಗಳನ್ನು ಪಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ರಮೇಶ ಪಾಟೀಲ ಸೋಲಪುರ ಅವರು ಸ್ವಇಚ್ಛೆಯಿಂದ ನನಗೆ ಜೆಡಿಎಸ್ ಟಿಕೆಟ್ ಬಿಟ್ಟುಕೊಟ್ಟಿದ್ದಾರೆ. 1985ರಲ್ಲಿ ನನ್ನ ತಂದೆ ಗುರುಪಾದಪ್ಪ ನಾಗಮಾರಪಳ್ಳಿ ಅವರು ಜೆಡಿಎಸ್ ಟಿಕೆಟ್ ಪಡೆದು ಗೆದ್ದಿದ್ದರು. ಈ ಬಾರಿ ನಾನು ಜೆಡಿಎಸ್ ಟಿಕೆಟ್ ಪಡೆದಿದ್ದೇನೆ. ನನ್ನ ಗೆಲುವು ನಿಶ್ಚಿತ’ ಎಂದು ಹೇಳಿದರು.
ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಲಿಂಗಾಯತ ಮುಖಂಡರಿಗೆ ಟಿಕೆಟ್ ಕೊಡಲಿಲ್ಲ. ಬೇರೆ ಆಯ್ಕೆ ಇಲ್ಲದೆ ಅವರು ಅನ್ಯ ಪಕ್ಷ ಸೇರಬೇಕಾಯಿತು. ನಾನೂ ಅನಿವಾರ್ಯವಾಗಿ ಜೆಡಿಎಸ್ ಬರಬೇಕಾಯಿತು’ ಎಂದು ಹೇಳಿದರು.
‘ರಾಜ್ಯದಲ್ಲಿ ಎಷ್ಟೇ ಸ್ಥಾನಗಳನ್ನು ಗೆದ್ದರೂ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಕ್ಷೇತ್ರದ ಜನತೆಯ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಹಾಗೂ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಬದ್ಧನಾಗಿದ್ದೇನೆ. ಗೋದಾವರಿ ಬಚಾವತ್ ಆಯೋಗದ ವರದಿ ಪ್ರಕಾರ ಮಾಂಜ್ರಾ ನದಿ ನೀರು ಹರಿದು ಹೋಗುವುದನ್ನು ತಪ್ಪಿಸಲು ಯೋಜನೆ ರೂಪಿಸಲಾಗುವುದು. ಈ ದಿಸೆಯಲ್ಲಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ’ ಎಂದು ತಿಳಿಸಿದರು.
‘ಹಿಂದೆ ನನ್ನ ತಂದೆಯವರು ಗುರುಪಾದಪ್ಪ ಅವರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದ್ದರು. ಈಗ ಜಿಲ್ಲಾ ಅಧ್ಯಕ್ಷನಾಗಿ ನಾನು ಜೆಡಿಎಸ್ ಟಿಕೆಟ್ ಅನ್ನು ವರಿಷ್ಠರ ಸೂಚನೆಯಂತೆ ಸೂರ್ಯಕಾಂತ ಅವರಿಗೆ ಬಿಟ್ಟುಕೊಟ್ಟಿರುವೆ. ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಬೇಕು ಎನ್ನುವುದೇ ನನ್ನ ಉದ್ದೇಶವಾಗಿದೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಮುಂದುವರಿಯುವೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು ಇದ್ದರು.