ಬೀದರ: ಬೀದರ ಶಾಸಕ ರಹೀಂ ಖಾನ್ ಅವರು ರವಿವಾರ ಬೀದರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಕಾಲಿಕ ಆಲಿಕಲ್ಲು ಮಳೆಯಿಂದ ಆಗಿರುವ ಬೆಳೆ ಹಾನಿಯನ್ನು ವೀಕ್ಷಿಸಿದರು. ಕ್ಷೇತ್ರದ ಮರಕಲ್, ದದ್ದಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು ರೈತರ ಅಹವಾಲು ಆಲಿಸಿದರು.
ಭಾರಿ ಮಳೆ ಮತ್ತು ಗಾಳಿ ಬೀಸಿದ ಪರಿಣಾಮ ಬಿಳಿ ಜೋಳ, ಮಾವಿನಕಾಯಿ, ತರಕಾರಿ ಬೆಳೆಗಳು ಹಾಳಾಗಿವೆ ಎಂದು ರೈತರು ಹೇಳಿದರು. ಬೆಳೆದು ನಿಂತಿರುವ ಬೆಳೆಗಳೆಲ್ಲವೂ ನೀರು ಪಾಲಾಗಿವೆ ಎಂದು ಶಾಸಕರ ಎದುರು ತಮ್ಮ ಸಮಸ್ಯೆಯನ್ನು ಬಿಚ್ಚಿಟ್ಟರು.
ಈ ವೇಳೆ ಮಾತನಾಡಿದ ಶಾಸಕರಾದ ರಹೀಂ ಖಾನ ಅವರು. ಬೆಳೆ ಹಾನಿಯನ್ನು ಖುದ್ದು ವೀಕ್ಷಿಸಿದ್ದೇನೆ.ರೈತರು ಸಂಕಷ್ಟದಲ್ಲಿರುವುದು ಮನವರಿಕೆಯಾಗಿದೆ. ಪ್ರಕೃತಿ ವಿಕೋಪದಿಂದ ಹೀಗಾಗಿದೆ. ಈಗ ಹಾಳಾಗಿರುವ ಎಲ್ಲ ಬೆಳೆಗಳಿಗೆ ಸರಕಾರದಿಂದ ಕೂಡಲೇ ಪರಿಹಾರ ಕೊಡಿಸಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ ಸದಸ್ಯ ಅರವಿಂದಕುಮಾರ ಅರಳಿ ಅವರೂ ಸಹ ಬೆಳೆ ಹಾನಿಯನ್ನು ವೀಕ್ಷಣೆ ಮಾಡಿದರು. ಬೀದರ ತಹಸೀಲ್ದಾರ, ಕೃಷಿ ಇಲಾಖೆಯ ಸಹಾಯಕ ನಿರ್ಧೇಶಕ ಧೂಳಪ್ಪ, ತಾಪಂನ ಮಾಜಿ ಸದಸ್ಯ ಬಸವರಾಜ ಬುಯ್ಯ, ದೀಪಕ ಮರಕಲ್, ಚಂದ್ರಶೇಕರ ಹಗೂ ಗ್ರಾಮಸ್ಥರು, ರೈತರು ಈ ವೇಳೆ ಉಪಸ್ಥಿತರಿದ್ದರು.