ಬೀದರ್: ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣದಿಂದ ಇಡಿ ಜೀವನದ ಸಾರ ಅಂದರೆ, ಮಗು ಜನಿಸಿದಾಗಿನಿಂದ ಕೋನೆಯ ಕ್ಷಣದ ವರೆಗೆ ಜೀವನ ಹೇಗೆ ಸಾಗಿಸಬೇಕು? ಯಾವ ರೀತಿ ಬದುಕಬೇಕು? ಯಾವರೀತಿ ಸೇವೆ ಗೈಯಬೇಕು? ಏಕಪತ್ನಿತ್ವದೊಂದಿಗೆ ಸಹೋದರತ್ವ ಮಹತ್ವದ ಸಂದೇಶ ನೀಡಿದ ರಾಮಾಯಣದಿಂದ ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ಮತ್ತು ಆರ್ಥಿಕ ಪ್ರಗತಿಯ ಮುನ್ನಡೆ ಕುರಿತು ತಿಳಿಯಬಹುದಾಗಿದೆ. ಪ್ರತಿಯೊಬ್ಬರು ಆ ತತ್ವದಂತೆ ನಡೆದರೇ ಸುಂದರ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯ ಎಂದು ಸಾಹಿತಿ ಕಥೆಗಾರ್ತಿ ಶ್ರೀಮತಿ ಬಿ.ಜೆ. ಪಾರ್ವತಿ ಸೋನಾರೆ ಅವರು ಕರೆ ನೀಡಿದರು.
ಅವರು ಇಂದು ರವಿವಾರ ಬೆಳಿಗ್ಗೆ ಬೀದರ ನಗರದ ಪನ್ಸಾಲ್ ತಾಲೀಮ್ನಲ್ಲಿರುವ ಶ್ರೀ ಮಹಾಸಿದ್ಧ ಮಡಿವಾಳೆಶ್ವರ ಮಂದಿರದ ಆವರಣದಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ನಿಜ ಶರಣ ಅಂಬಿಗರ ಚೌಡಯ್ಯನವರ ಜೀವನ ಮಾಹಿತಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ವಾಲ್ಮೀಕಿ ಪುಸ್ತಕದ ಲೇಖಕ, ಸಾಹಿತಿ ಓಂಪ್ರಕಾಶ ಧಡ್ಡೆ ಯವರು ಮಾತನಾಡಿ, ಮಹಾತ್ಮರ ಜೀವನ ಚರಿತ್ರೆ ಓದುವುದರಿಂದ ತಮ್ಮೋಳಗಿರುವ ಕೆಟ್ಟ ಗುಣಗಳು ಸುಟ್ಟು ಹೋಗುವವು ಎಂದರು.
ಚರಜಂಗಮ ಸಿದ್ರಾಮಪ್ಪಾ ಕಪಲಾಪೂರೆ ಅವರು ಮಾತನಾಡಿ, ಪ್ರತಿಯೊಬ್ಬರು ಅಂಬಿಗರ ಚೌಡಯ್ಯನವರ ಟೀಕಾ ಪ್ರಹಾರವಾದ ವಚನ ಸಾಹಿತ್ಯ ಓದಲೇಬೇಕು ಎಂದು ಕರೆ ನೀಡಿದರು.
ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ನಾಗಶೆಟ್ಟಿ ಧರಮಪೂರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶೃತಿ ಶರಣು ರಾಂಪೂರೆ ವಂದಿಸಿದರು