ಬೀದರ್: ಗಾಂಧಿ ಜಯಂತಿಯ ದಿನ ಸರ್ಕಾರ ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ಬದಲು 600 ಗ್ರಾಮ ಪಂಚಾಯತಿಗಳೂ ಸೇರಿದಂತೆ ರಾಜ್ಯಾದ್ಯಂತ 1,000 ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಪ್ರಸ್ತಾವನೆ ಮುಂದಿಟ್ಟಿದೆ. ಇದು ಗ್ಯಾರಂಟಿ ಯೋಜನೆಗಳಿಂದ ಸಂತುಷ್ಟಗೊಂಡಿದ್ದ ಜನರಿಗೆ ಅಘಾತಗೊಳಿಸಿದೆ ಎಂದು ಮದ್ಯ ನಿಷೇಧ ಆಂದೋಲನ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂಘಟನೆಗಳ ಕಾರ್ಯಕರ್ತ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಗಾಂಧೀಜಿ ಜಯಂತಿಯಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಅಕ್ರಮ ಮದ್ಯ ಮಾರಾಟ ತಡೆಗಟ್ಟುವುದು ಮತ್ತು ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಸರ್ಕಾರದ ಪ್ರಸ್ತಾವನೆ ಖಂಡನೀಯವಾಗಿದೆ. ಯಾವುದೇ ಸರಕಾರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದು ಅಪರಾಧ ಎಂದು ಗಾಂಧೀಜಿ ಹೇಳಿದ್ದರು. ಸಂವಿಧಾನದ ಆಶಯವೂ ಅದೇ ಆಗಿದೆ. ಆದರೆ ಸರ್ಕಾರ ಹೊಸ ಮದ್ಯದಂಗಡಿ ತೆರೆಯಲು ಅನುಮತಿ ನೀಡುವ ನಿರ್ಧಾರ ಸಮಾಜಘಾತುಕವಾಗಿದೆ” ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
“ಮದ್ಯ ನಿಷೇಧ ಆಂದೋಲನ ಸಮಿತಿಯಿಂದ ರಾಜ್ಯದಲ್ಲಿ ಮಹಿಳೆಯರು 2015 ರಿಂದಲೂ ಸರಕಾರಕ್ಕೆ ತಮ್ಮಲ್ಲಿ ಒತ್ತಾಯಿಸಿ ಬೇಡಿಕೆಗಳನ್ನು ಮುಂದಿಡುತ್ತಿದ್ದೇವೆ. ಆದರೆ ಸರ್ಕಾರ ಮಾತ್ರ ಮಹಿಳೆಯರನ್ನು ಮತ್ತಷ್ಟು ಶೋಷಣೆಗೆ ಒಳಪಡಿಸುವ ನಿರ್ಧಾರಕ್ಕೆ ಕೈ ಹಾಕುತ್ತಿರುವುದು ವಿಪರ್ಯಾಸ” ಎಂದು ಬೇಸರ ವ್ಯಕ್ತಪಡಿಸಿದರು.