ಬೀದರ್: ಮನುಷ್ಯನ ಜೀವನದಲ್ಲಿ ಉತ್ಸವಗಳು ಬಹಳ ಅವಶ್ಯಕವಾಗಿದ್ದು ಇದರಿಂದ ನಮ್ಮ ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗಿದೆ ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವರಾದ ಭಗವಂತ ಖೂಬಾ ಹೇಳಿದರು.
ಅವರು ಶನಿವಾರ ಸಂಜೆ ಬೀದರ ನಗರದ ಕೋಟೆ ಆವರಣದಲ್ಲಿ ವರ್ಣ ರಂಜಿತವಾಗಿ ನಿರ್ಮಿಸಲಾದ ಪ್ರಮುಖ ವೇದಿಕೆಯಲ್ಲಿ ಬೀದರ ಉತ್ಸವ-2023ಕ್ಕೆ ಅದ್ದೂರಿ ಚಾಲನೆ ನೀಡಿ ಮಾತನಾಡಿದರು.
ಬೀದರ ಉತ್ಸವ 2005 ರಿಂದ ಪ್ರಾರಂಭವಾಗಿದ್ದು ಮಧ್ಯದಲ್ಲಿ ಬರಗಾಲ ಮತ್ತು ಕೋವಿಡದಿಂದ ಬೀದರ ಉತ್ಸವ ಸ್ಥಗಿತಗೊಂಡಿತ್ತು.
ಈ ವರ್ಷ ಬೀದರ ಜಿಲ್ಲೆಯ ಜನತೆಯ ಆಶೆಯದಂತೆ ಪಕ್ಷಾತೀತವಾಗಿ ಉತ್ಸವ ಆಚರಿಸಲು ನಿರ್ಧರಿಸಿದಂತೆ ಬೀದರ ಉತ್ಸವ ಆಚರಿಸಲಾಗುತ್ತಿದೆ.
ಬೀದರ ಜಿಲ್ಲೆಯ ಜನತೆ ಉತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿ ಮಾಡಬೇಕೆಂದರಲ್ಲದೆ ಬೀದರ ಉತ್ಸವದ ಯಶಸ್ವಿ ಕರ್ನಾಟದ ಮೂಲೆ ಮೂಲೆ ಇದರ ಚರ್ಚೆಗೆ ಬರುವಂತಾಗಬೇಕೆಂದರು.
ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ ಅವರು ಮಾತನಾಡಿ, ಬೀದರ ಜಿಲ್ಲೆಗೆ ಹಲವಾರು ಕಲಾ ತಂಡಗಳು ಬಂದಿವೆ ಈ ನಾಡು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ, ಬಸವಣ್ಣನವರ ಕರ್ಮ ಭೂಮಿಯಾಗಿದೆ. ಬೀದರ ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಥಳಗಳಾದ ಪಾಪನಾಶ, ಶಿವ ದೇವಾಲಯ, ಗುರುದ್ವಾರ ಸೇರಿದಂತೆ ಹಲವಾರು ಸ್ಥಳಗಳಿಗೆ ಹೆಸರುವಾಸಿಯಾದ ಜಿಲ್ಲೆಯಾಗಿದೆ ಎಂದು ಹೇಳಿದರು.
ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಅವರು ಮಾತನಾಡಿ, ಬೀದರ ಜಿಲ್ಲೆಯು ವಿಶೇಷ ಇತಿಹಾಸ, ಪರಂಪರೆ, ಸಂಸ್ಕೃತಿ ಹೊಂದಿದ್ದು, ಇಂತಹ ಉತ್ಸವಗಳ ಮೂಲಕ ಜನತೆ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಬೀದರ ಉತ್ಸವ ಜನರಿಂದ ಜನರಿಗಾಗಿದ್ದು,
ಈ ಉತ್ಸವ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಬೀದರ ಶಾಸಕ ರಹೀಮ ಖಾನ್ ಅವರು ಈ ವರ್ಷ ಬೀದರ ಉತ್ಸವ ಆಚರಣೆಗೆ ಬೆಂಬಲ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಬೀದರ ನಗರದ ಸಾರ್ವಜನಿಕರಿಗೂ ಅಭಿನಂದಿಸಿದರು. ಶಾಂತಿಯಿಂದ ಈ ಉತ್ಸವ ವೀಕ್ಷಣೆಗೆ ಶಾಂತಿಯಿಂದ ಬಂದಿರುವುದು ಸಂತೋಷದ ಸಂಗತಿ. ಬೀದರದಲ್ಲಿ ಶಾಂತಿ ಸೌರ್ಹದತೆ ಕಾಪಾಡಲು ಮತ್ತು ಬೀದರ ನಗರದ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದೆ. ನನ್ನ ಕೊನೆಯುಸಿರು ಇರುವವರೆಗೆ ಜನತೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶೈಲೇಂದ್ರ ಕೆ. ಬೆಲ್ದಾಳೆ, ಬಸವಕಲ್ಯಾಣ ಶಾಸಕರಾದ ಶರಣು ಸಲಗರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪೂರೆ, ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷರಾದ ರವೂಫುದ್ಧಿನ್ ಕಛೇರಿವಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸ್ವಾಗತಿಸಿದರು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರು ವಂದಿಸಿದರು.
ಇದಕ್ಕೂ ಮುನ್ನ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.