ಬೀದರ್: ಶಿವಾಜಿ ಮಹಾರಾಜರು ಕೇವಲ ಒಂದು ಧರ್ಮಕ್ಕಾಗಿ ಹೋರಾಡದೆ ಸರ್ವ ಧರ್ಮದ ಒಳಿತಿಗಾಗಿ ಹೋರಾಡಿದ ಮಹಾನ್ ಪುರುಷರಾಗಿದ್ದು, ಅವರಿಗೆ ಕೇವಲ ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಸೂಕ್ತವಲ್ಲ ಎಂದು ಬೀದರ್ ಉತ್ತರ ಶಾಸಕ ರಹೀಮ ಖಾನ್ ಹೇಳಿದರು.
ಅವರು ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಬೀದರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಮಕ್ಕಳು ಶಿವಾಜಿ ಮಹಾರಾಜರ ನಿಜವಾದ ಇತಿಹಾಸ ಅರಿಯುವಲ್ಲಿ ಎಡವುತ್ತಿದ್ದು, ಹಿರಿಯರು ಇವರಿಗೆ ಸರಿಯಾದ ರೀತಿಯಲ್ಲಿ ಛತ್ರಪತಿ ಶಿವಾಜಿ ಅವರ ಇತಿಹಾಸ ತಿಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಬೀದರ್ ಜಿಲ್ಲೆಯು ಶಾಂತಿಗೆ ಹೆಸರುವಾಸಿಯಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಸೇವೆಗೆ ಮತ್ತೆ ಅವಕಾಶ ಸಿಕ್ಕಲ್ಲಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಲು ಬದ್ದನಾಗಿರುತ್ತೇನೆ ಎಂದು ಹೇಳಿದರು.
ಬೀದರ್ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ಮಹಾನ ಪುರುಷ ಸಾರಿದ ಸನ್ಮಾರ್ಗಗಳನ್ನು ಜನರು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುವ ಉದ್ದೇಶದಿಂದ ಸರ್ಕಾರ ಮಹನೀಯರ ಜಯಂತಿ ಆಚರಿಸುತ್ತಿದೆ, ಕೇವಲ ಅವರ ಜಯಂತಿಗಳಿಗೆ ಸೀಮಿತಗೊಳಿಸದೆ ನಿತ್ಯ ಜೀವನದಲ್ಲಿ ಅವರ ಸಂದೇಶಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.