ಬೀದರ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಕ್ಕಾ, ಭಗವಂತ ಖೂಬಾ ಅವರ ಮತ್ತೊಂದು ಬಾರಿಯ ಗೆಲುವಿನ ಬಗ್ಗೆ ಪ್ರಭು ಚವ್ಹಾಣ್ ಹಾಗೂ ಶರಣು ಸಲಗರ್ ಅವರನ್ನು ಕೇಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಲೇವಡಿ ಮಾಡಿದರು.
ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮುಂಬರುವ ಲೋಕಸಭೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಗೆಲ್ಲುತ್ತೇವೆ, ಚುನಾವಣೆಗೆ ನಾನು ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದರು.
ನಾವು 135 ಶಾಸಕರಿದ್ದೇವೆ, ಗಟ್ಟಿಯಾಗಿದ್ದೇವೆ, ನಾನು ಹಾಗೂ ಸಚಿವ ರಹೀಮ್ಖಾನ್ ಕೊಲೆ ಮಾಡ್ತೇವೆ ಎಂದು ಒಬ್ಬರಿಗೊಬ್ಬರು ಮಾತಿಗಿಳಿದಿದ್ದೇವೆಯೇ? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಮೊದಲು ಅದನ್ನು ನೋಡಿ ಎಂದು ಬಿಜೆಪಿ ಮುಖಂಡರಿಗೆ ಹೇಳುವ ಮೂಲಕ ಬಿಜೆಪಿಯ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಶಾಸಕ ಪ್ರಭು ಚವ್ಹಾಣ್ ಮಧ್ಯದ ಬಿರುಕನ್ನು ಪರೋಕ್ಷವಾಗಿ ಕುಟುಕಿದರು.
ಬರುವ 6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂದು ಹೇಳಿರುವ ಬಸವರಾಜ ಯತ್ನಾಳ ಹೇಳಿಕೆ ಹಾಸ್ಯಾಸ್ಪದ. ಹತಾಶ ಭಾವದಿಂದ ಇಂಥ ಹೇಳಿಕೆ ನೀಡುತ್ತಿದ್ದಾರೆ. ಆದರೆ ಸರ್ಕಾರ ಬಂದು ಮೂರು ತಿಂಗಳಾದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವುದು ಬಿಜೆಪಿಗೆ ಆಗಿಲ್ಲ. ಪ್ರಜಾಪ್ರಭುತ್ವ ಯಶಸ್ವಿಯಾಗಿ ನಡೆಯಬೇಕಾದರೆ ವಿರೋಧ ಪಕ್ಷದ ನಾಯಕ ಇರಬೇಕು. ಆದರೆ ಇವರು ತಮ್ಮೊಳಗೆ ಹೊಡೆದಾಡಿಕೊಳ್ಳುತ್ತಿದ್ದರೂ ಕಾಂಗ್ರೆಸ್ ಗಟ್ಟಿತನದ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಖೂಬಾ ಹಾಗೂ ಪ್ರಭು ಚವ್ಹಾಣ್ ಅವರ ವಿಚಾರ ಬಿಜೆಪಿಗೆ ಸಂಬಂಧಿಸಿದ್ದು, ನಾನು ಹೊಂದಾಣಿಕೆ ರಾಜಕಾರಣ ಮಾಡಿದವನಲ್ಲ. ಯಾರು ಏನು ಸಾಧನೆ ಮಾಡಿದ್ದಾರೆ ಎಂಬುವದು ಜನರಿಗೆ ಗೊತ್ತಿರುವ ವಿಚಾರ. ಗಾಳಿಯಲ್ಲಿ ಬಂದವರು ಗಾಳಿಯಲ್ಲಿ ಹೋಗುತ್ತಾರೆ ಎಂದು ಭಗವಂತ ಖೂಬಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ನಾನು ಸ್ವಾತಂತ್ರ್ಯ ಸೇನಾನಿಯ ಮಗನಿದ್ದೇನೆ. ನಾವು ಎಲ್ಲ ಸಮರ್ಪಣೆ ಮಾಡಿದ್ದೇವೆ. ನೈತಿಕತೆ ಇದ್ದರೆ ಯಾರು ಒಂದು ನಯಾ ಪೈಸೆ, ಒಂದಿಂಚು ಜಾಗ ಹೊಡೆದಿದ್ದಾರೆ ಎಂಬುವದನ್ನು ಸಾಬೀತುಪಡಿಸಿ ತೋರಿಸಲಿ. ಸುಳ್ಳು ಹೇಳುವುದರಲ್ಲಿಯೇ ಅವರ ಕಾಲ ಕಳೆದು ಹೋಯಿತು ಎಂದರು. ಬರುವ ದಿನಗಳಲ್ಲಿ ವಿನೂತನ ರೀತಿಯಲ್ಲಿ ಜನ ಸಂಪರ್ಕ ಸಭೆ ಮಾಡಿ, ಇದರ ಮುಖಾಂತರ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಂಚರಿಸಿ ಸ್ಥಳದಲ್ಲಿಯೇ ಅವರ ಸಮಸ್ಯೆ ಬಗೆಹರಿಸುತ್ತೇವೆ. ಜನಸ್ನೇಹಿ ಸರ್ಕಾರ ನಮ್ಮದಾಗಿದೆ ಎಂದು ಖಂಡ್ರೆ ತಿಳಿಸಿದರು.