ಬಳ್ಳಾರಿ: ಸೋಲಾಪುರ ಗ್ರಾಮದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಮಹಾಮಸ್ತಕಾಭಿಷೇಕಕ್ಕೆ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಜೆ.ಎನ್.ಗಣೇಶ್ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಶ್ರೀರಾಮುಲು, ಮಹರ್ಷಿ ವಾಲ್ಮೀಕಿ ಅವರು ಜ್ಞಾನದ ಮೂಲವಾಗಿದ್ದಾರೆ. ರಾಮಾಯಣ ಪರಿಚಯಿಸಿದ್ದಾರೆ. ಮಹಾಕಾವ್ಯದ ಮೂಲಕ ಅವರು ತಮ್ಮಲ್ಲಿರುವ ಜ್ಞಾನದ ನಿಧಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
ವಾಲ್ಮೀಕಿಯ ರಾಮಾಯಣವು ಜನರ ಎಲ್ಲಾ ಸಮಸ್ಯೆಗಳು, ಕಷ್ಟಗಳು ಮತ್ತು ಸವಾಲುಗಳಿಗೆ ಉತ್ತರ ಮತ್ತು ಪರಿಹಾರಗಳನ್ನು ಹೊಂದಿದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಪ್ರಮುಖ ಅಂಶಗಳನ್ನು ರಾಮಾಯಣ ಮಹಾಕಾವ್ಯದಿಂದ ಕಲಿಯಬಹುದು ಎಂದರು.
ವಾಲ್ಮೀಕಿಯವರ ಜೀವನದ ಬಗ್ಗೆ ಸಮಾಜ ಮಕ್ಕಳಿಗೆ ತಿಳಿಹೇಳಬೇಕು. ಉತ್ತಮ ಶಿಕ್ಷಣ ನೀಡಬೇಕು. ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕು. ವಾಲ್ಮೀಕಿ ಮಹಾನ್ ವ್ಯಕ್ತಿಯಾಗಿದ್ದು, ಒಂದು ಸಮುದಾಯಕ್ಕೆ ಸೀಮಿತವಾಗಬಾರದು ಎಂದ ಅವರು, ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.